ಹೊಸ ದಿಗಂತ ವರದಿ, ಕುಶಾಲನಗರ:
ಈ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ವಾಸದ ಮನೆಯೊಂದು ಕುಸಿದಿರುವ ಘಟನೆ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಅಳುವಾರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಶ್ರೀನಿವಾಸ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಅಧಿಕ ಮಳೆಯಿಂದಾಗಿ ಕುಸಿದಿದೆ.
ಸ್ಧಳಕ್ಕೆ ಕುಶಾಲನಗರ ಉಪ ತಹಶಿಲ್ದಾರ ಮಧು ಕುಮಾರ್, ಕಂದಾಯ ನಿರೀಕ್ಷಕ ಸಂತೋಷ್, ಲೆಕ್ಕಾಧಿಕಾರಿ ಪೀರ್ ಅಹಮದ್ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಅವಧಿಗೆ ಮುನ್ನವೇ ಭರ್ತಿ: ಕಾವೇರಿ ನೀರಾವರಿ ನಿಗಮದ ಅಧೀನದ ಚಿಕ್ಲಿಹೊಳೆ ಜಲಾಶಯ ಈ ಬಾರಿ ಅವಧಿಗೆ ಮುನ್ನವೇ ಭರ್ತಿಯಾಗುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಜಲಾಶಯದಿಂದ ವೃತ್ತಾಕಾರವಾಗಿ ಹರಿಯುತ್ತಿರುವ ನೀರು ನಯನಮನೋಹರವಾಗಿದೆ.
ಈ ಕಿರಿದಾದ ಜಲಾಶಯ 2137 ಎಕರೆಗಳಷ್ಟು ಪ್ರದೇಶಕ್ಕೆ ಮಾತ್ರ ನೀರನ್ನು ಒದಗಿಸುತ್ತದೆ. ಇದರ ವಿಕ್ಷಣೆಗೆ ಜಿಲ್ಲೆಗೆ ಬರುವ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.