ಹೊಸದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಸೋಮವಾರವೂ ಮುಂದುವರಿದಿದೆ. ಕಾವೇರಿ, ಹಾರಂಗಿ, ಲಕ್ಷ್ಮಣ ತೀರ್ಥ ಸೇರಿದಂತೆ ಜಿಲ್ಲೆಯ ಬಹುತೇಕ ನದಿ ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹರಿಯುತ್ತಿರುವ ಹೊಳೆಗಳು ಕೂಡಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹಲವು ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ಮಳೆಯೊಂದಿಗೆ ಮೈ ಕೊರೆಯುವ ಚಳಿಯೂ ಇದ್ದು, ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ.
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 66.71 ಮಿ.ಮೀ. ಮಳೆಯಾಗಿದೆ. ಮಡಿಕೇರಿ ಕಸಬಾ ಹೋಬಳಿಯಲ್ಲಿ 97.40, ನಾಪೋಕ್ಲು 60, ಸಂಪಾಜೆ 79, ಭಾಗಮಂಡಲ 126 ಮಿ.ಮೀ. ಸೇರಿದಂತೆ ಸರಾಸರಿ 90.60 ಮಿ.ಮೀ. ಮಳೆಯಾಗಿದೆ.
ವೀರಾಜಪೇಟೆ ಕಸಬಾ ಹೋಬಳಿಯಲ್ಲಿ 56.40, ಹುದಿಕೇರಿ 69.80, ಶ್ರೀಮಂಗಲ 84.40, ಪೊನ್ನಂಪೇಟೆ 36, ಅಮ್ಮತ್ತಿ 10.50, ಬಾಳೆಲೆ 44.40 ಮಿ.ಮೀ.ಸೇರಿದಂತೆ ತಾಲೂಕಿನಲ್ಲಿ ಸರಾಸರಿ ಮಳೆ 50.25 ಮಿ.ಮೀ. ಮಳೆಯಾಗಿದ್ದರೆ, ಸೋಮವಾರಪೇಟೆ ಕಸಬಾ ಹೋಬಳಿಯಲ್ಲಿ 63.60 ಶನಿವಾರಸಂತೆ 33.40, ಶಾಂತಳ್ಳಿ 118, ಕೊಡ್ಲಿಪೇಟೆ 44, ಕುಶಾಲನಗರ 28.60, ಸುಂಟಿಕೊಪ್ಪ 68 ಮಿ.ಮೀ. ಸೇರಿದಂತೆ ತಾಲೂಕಿನಲ್ಲಿ ಸರಾಸರಿ 59.27 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದಿಂದ 21,186 ಕ್ಯುಸೆಕ್ ನೀರು ಬಿಡುಗಡೆ:
ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿರುವ. ಪರಿಣಾಮವಾಗಿ ಸೋಮವಾರ ಜಲಾಶಯಕ್ಕೆ 17,231ಕ್ಯುಸೆಕ್ ನೀರು ಹರಿದು ಬಂದಿದ್ದು, ಜಲಾಶಯದಿಂದ ನಾಲೆಗೆ 20 ಹಾಗೂ ನದಿಗೆ 21,166 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸೋಮವಾರ ಜಲಾಶಯದ ನೀರಿನ ಮಟ್ಟವನ್ನು 2853.75 ಅಡಿಗಳಿಗೆ ಕಾಯ್ದಿರಿಸಿಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಯಶಯದ ನೀರಿನ ಮಟ್ಟ 2844.02 ಅಡಿಗಳಷ್ಟಿತ್ತು.