ಹೊಸದಿಗಂತ ವರದಿ ರಾಮನಗರ:
ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಆರ್ಭಟಿಸುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಬಿರುಸಿನಿಂದಲೇ ಆರಂಭಗೊಂಡ ಮಳೆ 10 ಗಂಟೆ ಕಳೆದರೂ ಬಿಡುವು ನೀಡದೇ ಇರುವುದು ಜನರ ಜೀವನವನ್ನು ಹೈರಾಣಾಗಿದ್ದು, ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿನ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಶಾಲೆಗಳಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಮಳೆಯಿಂದಾಗಿ ಕೆಲಸಗಳಿಗೆ ತೆರಳ ಬೇಕಿದ್ದ ಜನತೆಗೂ ತೊಂದರೆ ಆಗಿದೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ನಡೆಯಬೇಕಿದ್ದ ವ್ಯಾಪಾರಕ್ಕೂ ಕತ್ತರಿ ಬಿದ್ದಿದೆ. ಮಾರುಕಟ್ಟೆಗಳ ಬಳಿಯೂ ಜನ ಸುಳಿಯದಂತಾಗಿದ್ದು, ವ್ಯಾಪಾರಾಸ್ಥರು ಮಳೆ ನಿಲ್ಲುವಿಕೆಗಾಗಿಯೇ ಪ್ರಾರ್ಥನೆ ಮಾಡುತ್ತಿದ್ದಾರೆ.
ಸಂಚಾರ ಬಂದ್ :
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿಯೂ ಭಾರಿ ನೀರು ಸಂಗ್ರಹವಾಗಿರುವ ಕಾರಣದಿಂದಾಗಿ ಸಂಚಾರವೂ ಬಂದ್ ಆಗಿದೆ. ರಾಮನಗರ ಬಸವನಪುರ, ಕನಕಪುರ ಸರ್ಕಲ್ನಲ್ಲಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುವ ಕಾರಣದಿಂದಾಗಿ ವಾಹನಗಳ ಸಾಲುಗಟ್ಟಿ ನಿಂತಿವೆ. ಕೆಲವು ಕಡೆಗಳಲ್ಲಿ ನೀರಿನಲ್ಲಿ ವಾಹನ ಚಲಾಯಿಸಲು ಮುಂದಾದ ಪರಿಣಾಮ ಕಾರೊಂದು ನೀರಿನಲ್ಲಿ ಮುಳುಗಿದೆ, ಬಿಳಗುಂಬ ಕ್ರಾಸ್ ಬಳಿ ಖಾಸಗಿ ಬಸ್ ಅರ್ಧದಷ್ಟು ಮುಳುಗಿದೆ.
ಶಾಲೆಗಳಿಗೆ ರಜೆ: ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ. ಹೆಚ್ಚಿನ ಶಾಲಾ ಆವರಣದಲ್ಲಿಯೂ ನೀರು ನಿಂತಿರುವುದು ಹಾಗೂ ಸಾರಿಗೆ ವ್ಯವಸ್ಥೆ ಕೊರೆತೆಯಿಂದಾಗಿ ಶಿಕ್ಷಕರೂ ಸಹ ಶಾಲೆಗಳಿಗೆ ತೆರಳಲು ಸಾಧ್ಯವಾಗದ ಕಾರಣದಿಂದಾಗಿ ರಜೆ ಘೋಷಣೆ ಮಾಡಲಾಗಿದೆ.