ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿಯಲ್ಲಿ ವರುಣ ತಂಪೆರೆದಿದ್ದಾನೆ.ಶನಿವಾರ ಸಂಜೆ (ಮೇ 20) ಬಿರುಗಾಳಿ ಸಹಿತ ಭಾರಿ (Karnataka rain) ಮಳೆಯಾಗಿದೆ.
ಕಳೆದೆರಡು ದಿನಗಳಿಂದ ನಗರದಲ್ಲಿ ಮುಂಜಾನೆ ಹೊತ್ತು ಬಿಸಿಲು, ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ಇತ್ತು. ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ (Weather Report) ತಂಪೆರೆದಿದ್ದಾನೆ.
ಸಂಜೆ ಸುಮಾರು 5 ಗಂಟೆಗೆ ಸುರಿದ ಮಳೆಯು ವಾಹನ ಸಂಚಾರರಿಗೆ ಭಾರಿ ಅಡ್ಡಿ ಮಾಡಿತು. ವೀಕೆಂಡ್ ಮೂಡ್ನಲ್ಲಿದ್ದ ಹಲವರಿಗೆ (Weekend mood) ನಿರಾಸೆ ಆಯಿತಾದರೂ, ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಖುಷಿಗೊಂಡಿದ್ದಾರೆ.
ನಗರದ ಕಾರ್ಪೋರೇಶನ್ ಸರ್ಕಲ್, ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ಸೇರಿ ವಿಧಾನಸೌಧ, ಬಾಳೇಕುಂದ್ರಿ ಸರ್ಕಲ್, ಶಿವಾಜಿನಗರ ಸುತ್ತಮುತ್ತ ಭಾರಿ ಮಳೆಯಾಗಿದೆ. ಇನ್ನೆರಡು ದಿನವೂ ಗುಡುಗು ಸಹಿತ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ದ್ವಿಚಕ್ರ ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಸ್ಕೈ ವಾಕ್, ಅಂಡರ್ ಪಾಸ್ಗಳಲ್ಲಿ ಆಶ್ರಯ ಪಡೆದರು. ಕೆಲವೇ ಗಂಟೆಗಳ ಮಳೆಗೆ ಹಲವು ರಸ್ತೆಗಳಲ್ಲಿ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿ ಆಯಿತು.
ಅಬ್ಬರದ ಮಳೆ ಸುರಿದ ಹಿನ್ನೆಲೆಯಲ್ಲಿ ಕಾರ್ಪೋರೇಷನ್ ಬಳಿ ಬಿಎಂಟಿಸಿ ಬಸ್ ಮೇಲೆ ಮರ ಉರುಳಿ ಬಿದ್ದಿದೆ. ಜತೆಗೆ ಆಟೋ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದಿದೆ.