ಹೊಸದಿಗಂತ ವರದಿ ಸುಬ್ರಹ್ಮಣ್ಯ:
ಭಾರಿ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಕುಮಾರಧಾರಾ ಬಳಿ ಭಾನುವಾರ ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ.
ಸುಬ್ರಹ್ಮಣ್ಯದಿಂದ ಪಂಜ, ಬೆಳ್ಳಾರೆ, ಕಾಣಿಯೂರು, ಪುತ್ತೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ನೆರೆ ನೀರು ನಿಂತಿದೆ. ಕುಮಾರಧಾರ ನದಿಯ ಉಪನದಿ ರಾಜ್ಯ ಹೆದ್ದಾರಿಯಲ್ಲಿರುವ ದರ್ಪಣತೀರ್ಥ ಸೇತುವೆ ಜಲಾವೃತಗೊಂಡಿದೆ.
ದರ್ಪಣ ತೀರ್ಥ ಸೇತುವೆಯಿಂದ ಸುಮಾರು ಇನ್ನೂರು ಮೀಟರ್ ದೂರದವರೆಗೆ ಹೆದ್ದಾರಿಯಲ್ಲಿ ಪ್ರವಾಹದ ನೀರು ನಿಂತಿದೆ. ಕುಮಾರಪರ್ವತ, ಸುಬ್ರಹ್ಮಣ್ಯ ಸುತ್ತಮುತ್ತ ಭಾರಿ ಮಳೆ ಹಿನ್ನೆಲೆಯಲ್ಲಿ ಕುಮಾರಧಾರ ನದಿಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಭಕ್ತರು ನೆರೆ ನೀರಿನಲ್ಲೇ ಸ್ನಾನ ಪೂರೈಸುತ್ತಿದ್ದಾರೆ.