ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುವೈತ್ಗೆ ಕೆಲಸ ಅರಸಿ ಹೋಗುವ ಹೆಣ್ಣುಮಕ್ಕಳಿಗೆ ಏಜೆಂಟ್ಗಳು ಚಿತ್ರಹಿಂಸೆ ನೀಡುತ್ತಿರುವುದಾಗಿ ತಿರುಪತಿ ಮೂಲದ ಯುವತಿಯೊಬ್ಬರು ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೊಟ್ಟೆಪಾಡಿಗಾಗಿ ವಿದೇಶದಲ್ಲಿ ದುಡಿಯುವ ಕನಸನ್ನು ಹೊತ್ತು ಹೋಗುವ ಹೆಣ್ಣುಮಕ್ಕಳು ನಾನಾ ರೀತಿಯ ಕಷ್ಟಗಳಿಗೆ ಒಳಗಾಗುತ್ತಾರೆ. ಅದರಲ್ಲೂ ಈ ಏಜೆಂಟರ ಮೂಲಕ ಬೇರೆ ದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡುವುದಿದೆಯಲ್ಲ ನರಕಯಾತನೆಗೆ ಸಮ.
ತಿರುಪತಿ ಜಿಲ್ಲೆಯ ಯರ್ರಾವರಿಪಾಲೆಂ ವಲಯದ ಬೋಡೆವೊಡ್ಲಾ ಗ್ರಾಮದ ಶ್ರಾವಣಿ ಏಜೆಂಟ್ ಚೆಂಗಲ್ ರಾಜನ ಮೂಲಕ ಇದೇ ತಿಂಗಳ 24ರಂದು ಕುವೈತ್ಗೆ ಕೆಲಸದ ನಿಮಿತ್ತ ತೆರಳಿದ್ದರು. ಅಲ್ಲಿಗೆ ಹೋದಾಗಿನಿಂದ ಚಿತ್ರಹಿಂಸೆ ನೀಡುತ್ತಿರುವುದಾಗಿ ಫೋನ್ ಮೂಲಕ ಪೋಷಕರಿಗೆ ವಿಷಯ ವಿವರಿಸಿದ್ದಾಳೆ. ಏಜೆಂಟ್ ಚೆಂಗಲ್ ರಾಜ ಮತ್ತು ಆತನ ಪಾರ್ಟ್ನರ್ ಶ್ರಾವಣಿಯನ್ನು ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದಾರೆ.
ಇಲ್ಲಿ ಬದುಕಬೇಕೆಂದರೆ ನಾವು ಹೇಳಿದಂತೆ ಕೇಳಬೇಕು. ತಮ್ಮ ಕೋರಿಕೆಗಳನ್ನು ತೀರಿಸಬೇಕೆಂದು ಪ್ರತಿದಿನ ಏಜೆಂಟ್ ರಾಜು ಹಾಗೂ ಆತನ ಪಾರ್ಟ್ನರ್ ಕಿರುಕುಳ ನೀಡುತ್ತಿದ್ದಾರೆ. ಕೋಣೆಯಲ್ಲಿ ಬಂಧಿಸಿ, ನಾಲ್ಕು ದಿನಗಳಿಂದ ಅನ್ನ, ನೀರು ನೀಡದೆ ಸತಾಯಿಸುತ್ತಿದ್ದಾರೆ. ತನ್ನನ್ನು ಭಾರತಕ್ಕೆ ಕಳುಹಿಸುವಂತೆ ಕೇಳಿಕೊಂಡರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಶ್ರಾವಣಿ ವಿಡಿಯೋ ಮೂಲಕ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಮಗಳ ಪರಿಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.