ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಕಲಚೇತನರ ಅನುಕೂಲಕ್ಕಾಗಿ ಬಸ್ಗಳಲ್ಲಿ ಆಡಿಯೋ ಅನೌನ್ಸ್ಮೆಂಟ್ ಸಿಸ್ಟಂ (ಎಎಎಸ್) ಕಾರ್ಯನಿರ್ವಹಿಸುವಂತೆ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ನಿರ್ದೇಶನ ನೀಡಿರುವ ಹೈಕೋರ್ಟ್, ವಿವಿಧ ಬಸ್ ನಿಲ್ದಾಣಗಳಲ್ಲಿ ವಿಶೇಷ ಚೇತನರು ಬಸ್ ಹತ್ತುವಾಗ ಮತ್ತು ಇಳಿಯುವಾಗ ಅವರಿಗೆ ಮಾರ್ಗದರ್ಶನ ನೀಡಲು ಲೌಡ್ ಸ್ಪೀಕರ್ ವ್ಯವಸ್ಥೆ ಅಳವಡಿಸಬೇಕು ಎಂದು ಹೇಳಿದೆ.
ಈ ನಿಟ್ಟಿನಲ್ಲಿ ಸುಧಾರಿತ ತಾಂತ್ರಿಕ ಉಪಕರಣಗಳು ಮತ್ತು ಸೌಲಭ್ಯಗಳನ್ನು ಪರಿಚಯಿಸಲು ಮತ್ತು ಯೋಜನೆಯು ನಿರಂತರವಾಗಿ ಕಾರ್ಯನಿರ್ವಹಿಸಲು ಸ್ಥಳೀಯ ಅಧಿಕಾರಿಗಳು ಸಾಕಷ್ಟು ಹಣವನ್ನು ಬಜೆಟ್ ನಿಬಂಧನೆಯಲ್ಲಿ ಮೀಸಲಿಡಬೇಕು ಎಂದು ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಅದರ ಸಾರಿಗೆ ನಿಗಮಗಳಿಗೆ ನಿರ್ದೇಶಿಸಿದೆ.
ಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ದಿವ್ಯಾಂಗರ ಅನುಕೂಲಕ್ಕಾಗಿ ಎಎಎಸ್ ಕಾರ್ಯನಿರ್ವಹಣೆ ಖಾತ್ರಿಪಡಿಸಬೇಕು. ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿನ ಎಲ್ಲಾ ಪ್ರಮುಖ ಬಸ್ ನಿಲ್ದಾಣ, ಸ್ಥಳಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ದಿವ್ಯಾಂಗ ಚೇತನರಾದ ಎನ್. ಶ್ರೇಯಸ್ ಮತ್ತು ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಶಿಯಲ್ ಕಾಸ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರ ವಿಭಾಗೀಯ ಪೀರ ಈ ನಿರ್ದೇಶನ ನೀಡಿದೆ. ವಿಕಲಾಂಗ ವ್ಯಕ್ತಿಗಳಿಗೆ ದೈಹಿಕವಾಗಿ ಮಾರ್ಗದರ್ಶನ, ನೆರವು ನೀಡಲು ಪ್ರಮುಖ ಸ್ಥಳಗಳು, ಬಸ್ ನಿಲ್ದಾಣಗಳಲ್ಲಿ ಮೇಲ್ವಿಚಾರಣಾ ನೌಕರರ ತಂಡವನ್ನು ನಿಯೋಜಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.