ಹೊಸದಿಗಂತ ವರದಿ,ಬಳ್ಳಾರಿ:
ಗಣಿನಾಡು ಬಳ್ಳಾರಿಯಲ್ಲಿ ಹಿಜಾಬ್- ಕೇಸರಿ ಸಂಘರ್ಷ ಗುರುವಾರವೂ ಮುಂದುವರೆದಿದ್ದು, ನಗರದ ಸರಳಾದೇವಿ ಸತಿಶ್ಚಂದ್ರ ಅಗರವಾಲ್ ಪದವಿ ಕಾಲೇಜು ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ವಿದ್ಯಾರ್ಥಿಗಳು ಮುಂದಾದಾಗ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು, ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು, ನಿಮ್ಮ ಧರ್ಮದ ಆಚರಣೆಗೆ ನಾವಲ್ಲ, ಯಾರೂ ಅಡ್ಡಿ ಬರೋಲ್ಲ, ಆದರೇ, ನ್ಯಾಯಾಲಯ ನೀಡಿದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಸಿಬ್ಬಂದಿಗಳು ಸೂಚಿಸಿದರು. ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಕಾಲೇಜು ಎದುರು ಜಮಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲು ಮುಂದಾದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೌಲ್ಬಜಾರ್ ಠಾಣೆ ಸಿಪಿಐ ಸುಭಾಷ್ ಸೇರಿದಂತೆ ನಾನಾ ಅಧಿಕಾರಿಗಳ ತಂಡ ಭೇಟಿ ನೀಡಿ ವಾತಾವರಣ ತಿಳಿಗಿಲೊಳಿಸಲು ಮುಂದಾದರು. ಇದಕ್ಕೂ ವಿದ್ಯಾರ್ಥಿಗಳು ಒಪ್ಪದ ಹಿನ್ನೆಲೆ ಹಿಜಾಬ್ ಪರ ವಿವಿಧ ಘೋಷಣೆಗಳನ್ನು ಕೂಗಿದರು. ಯಾವುದೇ ಕಾರಣಕ್ಕೂ ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಕೂಡದು, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಸಿಪಿಐ ಸುಭಷ್ ಅವರು ಸೂಚಿಸಿದರು. ಇದಕ್ಕೂಬಗ್ಗದ ಹಿನ್ನೆಲೆ ಸುಭಾಷ್ ಅವರು ನ್ಯಾಯವಾದಿಗಳೊಬ್ಬರನ್ನು ಸ್ಥಳಕ್ಕೆ ಕರೆಸಿ ನ್ಯಾಯಾಲಯದ ತೀರ್ಪಿನ ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡಿದರು. ನಂತರ ವಿದ್ಯಾರ್ಥಿಗಳು ಪಾಲಕರೊಂದಿಗೆ ನಿವಾಸದ ಕಡೆ ಹೆಜ್ಜೆ ಹಾಕಿದರು. ಆದರೂ ಮುಂಜಾಕೃತ ಕ್ರಮವಾಗಿ ಕಾಲೇಜು ಬಳಿ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಕಲ್ಪಿಸಿದ್ದು, ಸುಮಾರು ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.