ಹೊಸದಿಗಂತ ವರದಿ, ಗದಗ :
ತಾಲ್ಲೂಕಿನ ಐತಿಹಾಸಿಕ ಸ್ಥಳವಾದ ಲಕ್ಕುಂಡಿಯನ್ನು ಹಂಪಿ ಸರ್ಕ್ಯೂಟ್ನಲ್ಲಿ ಸೇರಿಸಲು ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಲಕ್ಕುಂಡಿ ಕ್ಷೇತ್ರವು ಹಂಪಿ ಸರ್ಕೀಟ್ ನ ಭಾಗವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ರೋಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೋಣ ಕ್ಷೇತ್ರದಲ್ಲಿ ಕೈಗಾರಿಕಾ ಅಭಿವೃದ್ದಿಯಾಗಿಲ್ಲ. ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ ಎಂಬ ವಿಷಯಕ್ಕೆ ಕುರಿತು ಪ್ರತಿಕ್ರಿಯೆಸಿದ ಅವರು ಸರ್ಕಾರ ಇಡೀ ರಾಜ್ಯದ ಅಭಿವೃದ್ಧಿಗೆ ಬದ್ದವಾಗಿದೆ. ರೋಣದ ಅಭಿವೃದ್ದಿಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ನಿಂದಾಗಿ ಮೃತಪಟ್ಟ ಗ್ರಾಮ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಸದಸ್ಯರ ಕುಟುಂಬದವರಿಗೆ ಇನ್ನೂ ಪರಿಹಾರ ನೀಡಲಾಗಿಲ್ಲ ಎಂಬ ವಿಷಯಕ್ಕೆ ಪ್ರತಿಕ್ರಿಯೆಸಿ ಈ ಬಗ್ಗೆ ಸಂಪೂರ್ಣ ವಿವರ ತರಿಸಿಕೊಂಡು, ಕೋವಿಡ್ ನಿಂದಲೇ ಮೃತಪಟ್ಟಿರುವ ಬಗ್ಗೆ ದಾಖಲೆ ಪಡೆದು ಖಂಡಿತವಾಗಿ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರುಗಳಾದ ಸಿ.ಸಿ.ಪಾಟೀಲ, ಬಸವರಾಜ ಬೈರತಿ, ಶಾಸಕರಾದ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಬಿಜೆಪಿ ಮುಖಂಡರುಗಳಾದ ರವಿ ದಂಡಿನ, ಭೀಮಸಿಂಗ ರಾಠೋಡ ಸೇರಿದಂತೆ ಮುಂತಾದವರು ಇದ್ದರು.