ನಾಳೆ ಐತಿಹಾಸಿಕ ತಲಕಾವೇರಿ ಪವಿತ್ರ ತೀರ್ಥೋದ್ಭವ: ಸಿದ್ಧತೆಗಳು ಪೂರ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತುಲಾ ಸಂಕ್ರಮಣದಂದು ತಲಕಾವೇರಿಯಲ್ಲಿ ಘಟಿಸಲಿರುವ ಕಾವೇರಿ ಪವಿತ್ರ ತೀರ್ಥೋಧ್ಬವ’ ಸಂಬಂಧ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಭಾನುವಾರ ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲಿಸಿದರು.
ಭಾಗಮಂಡಲದಲ್ಲಿ ಮುಡಿಶೆಡ್, ತ್ರಿವೇಣಿ ಸಂಗಮ ಬಳಿ ಪಿಂಡ ಪ್ರದಾನ ವ್ಯವಸ್ಥೆ, ಶೌಚಾಲಯ, ಸ್ವಚ್ಛತೆಗೆ ಕ್ರಮ ಮತ್ತಿತರವನ್ನು ಪರಿಶೀಲಿಸಿದರು.
ಬಳಿಕ ತಲಕಾವೇರಿಗೆ ತೆರಳುವ ಮಾರ್ಗ ಭಾಗಮಂಡಲದಿಂದ ತಲಕಾವೇರಿವರೆಗೆ ವಿದ್ಯುತ್ ದೀಪ, ತಲಕಾವೇರಿಯಲ್ಲಿ ಫೋಕಸ್ ಲೈಟ್ ವ್ಯವಸ್ಥೆ, ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಪೂಜಾ ಕಾರ್ಯದ ಸಿದ್ಧತೆಗಳನ್ನೂ ಅವರು ಪರಿಶೀಲಿಸಿದರು.
ವಾಹನಗಳ ನಿಲುಗಡೆಗೆ ವ್ಯವಸ್ಥೆ, ಬ್ಯಾರಿಕೇಡ್‍ಗಳ ನಿರ್ಮಾಣ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹೀಗೆ ಹಲವು ಸಿದ್ಧತೆಯನ್ನು ಶಾಸಕ ಕೆ.ಜಿ.ಬೋಪಯ್ಯ ಅವರು ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ಸೋಮವಾರ ರಾತ್ರಿ 7.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ’ಕ್ಕೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಪವಿತ್ರ ತೀರ್ಥೋದ್ಭವ ಸಂಬಂಧ ಪೂರ್ವಭಾವಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಎರಡು ಬಾರಿ ಸಭೆ ನಡೆದಿದೆ. ಈ ಬಾರಿ ಕೋವಿಡ್ ಇಲ್ಲದ ಕಾರಣ ಭಕ್ತಾದಿಗಳಿಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗದಂತೆ ಗಮನಹರಿಸಲಾಗಿದೆ. ಭಕ್ತಾದಿಗಳು ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡಬಾರದು. ಶ್ರದ್ದಾಭಕ್ತಿಯಿಂದ ತಾಯಿ ಶ್ರೀ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಬೇಕು. ಭಕ್ತಿ ಮತ್ತು ಪ್ರೀತಿಯಿಂದ ತೀರ್ಥೋದ್ಭವಕ್ಕೆ ಸಹಕರಿಸಬೇಕು ಎಂದು ಕೋರಿದರು.

ತೀರ್ಥಸ್ನಾನಕ್ಕೆ ಅವಕಾಶ: ಪವಿತ್ರ ತೀರ್ಥೋದ್ಭವ ಸಂಬಂಧ ಅಗತ್ಯ ಬಸ್ ಕಲ್ಪಿಸಲಾಗಿದೆ. ಹಿಂದಿನಂತೆ ಪವಿತ್ರ ತೀರ್ಥೋದ್ಭವ ನಂತರ ಕೊಳದಲ್ಲಿ ಭಕ್ತಾದಿಗಳಿಗೆ ಪವಿತ್ರ ಸ್ನಾನಕ್ಕೆ ಅವಕಾಶ ಇದೆ. ಭಕ್ತಾದಿಗಳು ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡಬಾರದು ಎಂದು ಅವರು ಮನವಿ ಮಾಡಿದರು.
ಗಣ್ಯರ ಆಗಮನ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಆದಿ ಚುಂಚನಗಿರಿ ಮಠದ ಮೈಸೂರು ಶಾಖೆಯ ಸ್ವಾಮೀಜಿ ಇತರರು ತೀರ್ಥೋದ್ಭವ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.
ಸಂಜೆ 5ರಿಂದ ಪೂಜೆ: ತೀರ್ಥೋದ್ಭವ ದಿನವಾದ ಸೋಮವಾರ ಸಂಜೆ 5 ಗಂಟೆಯಿಂದಲೇ ಪೂಜಾ ಕಾರ್ಯಗಳು ಆರಂಭವಾಗಲಿದೆ ಎಂದು ಪ್ರಧಾನ ಅರ್ಚಕ ಗುರುರಾಜ್ ಆಚಾರ್ಯ ಅವರು ಮಾಹಿತಿ ನೀಡಿದರು. 9 ಮಂದಿ ಅರ್ಚಕರು ಪವಿತ್ರ ತೀರ್ಥೋದ್ಭವದಲ್ಲಿ ಪೂಜಾ ವಿಧಿವಿಧಾನಗಳನ್ನು ನಡೆಸಲಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಹಾಗೂ ತಲಕಾವೇರಿ ಮತ್ತು ಭಾಗಮಂಡಲ ಭಗಂಡೇಶ್ವರ ದೇವಾಲಯಗಳ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಕೃಷ್ಣಪ್ಪ ಅವರು ತಲಕಾವೇರಿ ಪವಿತ್ರ ತೀರ್ಥೋಧ್ಬವ ಸಂಬಂಧ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗಮನಹರಿಸಲಾಗಿದ್ದು, ಭಕ್ತಾದಿಗಳು ಸಹಕರಿಸುವಂತೆ ಕೋರಿದರು.
‘ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಅವರು ತಲಕಾವೇರಿ ಪವಿತ್ರ ತೀರ್ಥೋಧ್ಬವ ಸಂಬಂಧ ಕೈಗೊಳ್ಳಲಾಗಿರುವ ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿದರು.
ಚಿನ್ನಾಭರಣ ಅಲಂಕಾರ: ಕ್ಷೇತ್ರದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರ ನೇತೃತ್ವದಲ್ಲಿ ಭಾಗಮಂಡಲದಿಂದ ತಲಕಾವೇರಿಗೆ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿ ತಾಯಿ ಶ್ರೀ ಕಾವೇರಿ ಮಾತೆಗೆ ಭಾನುವಾರ ತೊಡಿಸಲಾಯಿತು. ತಾ.ಪಂ.ಇಒ ಶೇಖರ್ ಇತರರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!