ಹೊಸ ದಿಗಂತ ವರದಿ: ವಿಜಯನಗರ (ಹೊಸಪೇಟೆ)
ಬಿ ಟಿವಿ ಸುದ್ದಿ ವಾಹಿನಿಯ ಬಳ್ಳಾರಿ ಜಿಲ್ಲೆ ವರದಿಗಾರ ಬಸವರಾಜ್ (38) ಹೊಸಪೇಟೆ ತಾಲೂಕಿನ ಮಲಪನಗುಡಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ಹೊಸಪೇಟೆಯಿಂದ ಬುಧವಾರ ಸಂಜೆ ಗೆಳೆಯ ಭಾಸ್ಕರ್ (40) ಅವರರೊಂದಿಗೆ ಹಂಪಿ ಸಮೀಪದ ತಮ್ಮ ಊರು ಕಮಲಾಪುರಿಗೆ ಬೈಕ್ನಲ್ಲಿ ಹೊರಟಿದ್ದಾಗ ಎದುರಿನಿಂದ ಬಂದ ಎಮ್ಮೆ ಅಡ್ಡಬಂದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ ಎಂದು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ವರದಿಗಾರ ಬಸವರಾಜ್ ಹಾಗೂ ಸ್ನೇಹಿತ ಭಾಸ್ಕರ್ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಬಸವರಾಜ್ ಅವರನ್ನು ದಾರವಾಡ ಎಸ್ಡಿಎಂ ಆಸ್ಪತ್ರಗೆ ದಾಖಲಿಸಿದರು ಬದುಕಿಳಿಯಲಿಲ್ಲ. ಭಾಸ್ಕರ್ ಅವರನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸವರಾಜ್ ಅವರು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಬಿ ಟಿವಿ ವರದಿಗಾರರಾಗಿ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿದರು. ಹಾಗೂ ಕಲರ್ಸ್ ಕನ್ನಡ ಹಾಗೂ ಕಸ್ತೂರಿ ವಾಹಿನಿಯಲ್ಲಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಯುವ ಪತ್ರಕರ್ತನ ನಿಧನಕ್ಕೆ ಬಳ್ಳಾರಿ-ವಿಜಯನಗರ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.