ಹೊಸದಿಗಂತ ವರದಿ ಮಡಿಕೇರಿ:
ಯುವತಿಯೊಬ್ಬಳನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಘಟನೆ ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಸಮೀಪದ ನಾಂಗಾಲ ಗ್ರಾಮದಲ್ಲಿ ನಡೆದಿದೆ.
ಭಾನುವಾರ ಸಂಜೆಗತ್ತಲಲ್ಲಿ ಈ ಕೃತ್ಯ ನಡೆದಿದ್ದು, ಕೊಲೆಯಾದ ಯುವತಿಯನ್ನು ಗ್ರಾಮದ ನಿವಾಸಿ ಬುಟ್ಟಿಯಂಡ ಮಾದಪ್ಪ ಅಲಿಯಾಸ್ ಸುನಂದ ಅವರ ಪುತ್ರಿ ಆರತಿ (24) ಎಂದು ಗುರುತಿಸಲಾಗಿದೆ.
ಆರತಿ ಕೊಲೆಯಾದ ಸ್ಥಳದಲ್ಲಿ ವ್ಯಕ್ತಿಯ ಹೆಲ್ಮೆಟ್ ಪತ್ತೆಯಾಗಿದ್ದು, ಇದು ತಮ್ಮಯ್ಯ ಎಂಬಾತನಿಗೆ ಸೇರಿದ್ದೆನ್ನಲಾಗಿದೆ. ಅಲ್ಲದೆ ಕೊಲೆಯಾದ ಅನತಿ ದೂರದಲ್ಲಿ ಆತನ ಮೊಬೈಲ್, ಬೈಕ್, ಮದ್ಯ ಹಾಗೂ ವಿಷದ ಬಾಟಲಿ, ಆತನದ್ದೆ ಎನ್ನಲಾದ ಚಪ್ಪಲಿ ಪತ್ತೆಯಾಗಿದ್ದು, ಆತ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಮೂರು ದಿನಗಳಿಂದ ತಮ್ಮಯ್ಯ ಆರತಿಗೆ ಕಿರುಕುಳ ನೀಡುತ್ತಿದ್ದುದಾಗಿ ಆರೋಪ ಕೇಳಿ ಬಂದಿದ್ದು, ಭಾನುವಾರ ರಾತ್ರಿ ಆತನೇ ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆ ವ್ಯಕ್ತಿಗಾಗಿ ವೀರಾಜಪೇಟೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.