ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಜಗದೀಶ ನಗರದ ಆಶ್ರಯಯೋಜನೆ ನಿವಾಸಿಗಳು ಹಕ್ಕುಪತ್ರ ನೀಡಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಬಂದಾಗ ಸ್ವೀಕರಿಸದ ಕಾರಣ ಅವರ ಬೆಂಗಾವಲು ಕಾರನ್ನು ತಡೆದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಸಿಎಂ ಅವರ ನಿವಾಸ ಮುಂದೆ ನಡೆದಿದೆ.
ನಗರದ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ತಮ್ಮ ಆಶ್ರಯೋಜನೆ ಮನೆ ಕಳೆದುಕೊಂಡ 200 ಕ್ಕೂ ಹೆಚ್ಚು ಆಶ್ರಯ ನಿವಾಸಿಗಳಿಗೆ ಹಕ್ಕುಪತ್ರ ದೊರೆಕಿಲ್ಲ. ನಿವಾಸಿಗಳು ಸಂಬಂಧಿಸಿದ ಶಾಸಕರಿಗೆ ಹಾಗೂ ಅಧಿಕಾರಿಗಳು ಹಲವಾರು ಬಾರಿ ಮನವಿ ಸಲ್ಲಿಸಿದರು ಯಾರು ಸ್ಪಂದಿಸಿಲ್ಲ.
ಆದರಿಂದ ಆಶ್ರಯ ಯೋಜನೆ ನಿವಾಸಿಗಳು ಮುಖ್ಯಮಂತ್ರಿ ಅವರಿಗೆ ತಕ್ಷಣ ಹಕ್ಕು ಪತ್ರ ನೀಡಬೇಕು ಎಂದು ಮನವಿ ಸಲ್ಲಿಸಲು ಬಂದಿದ್ದರು. ಸಿಎಂ ಅವರು ಮನವಿ ಸ್ವೀಕರಿಸದ ಕಾರಣ ಅಸಮಾಧಾನಗೊಂಡು ನಿವಾಸಿಗಳು ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಕೆಲವರು ಕಣ್ಣೀರು ಹಾಕಿ ಗೋಳಾಡಿದ ಘಟನೆ ನಡೆದಿದೆ.
ಬಳಿಕ ಸಿಎಂ ಅವರು ವಿಮಾನ ನಿಲ್ದಾಣದತ್ತ ಸಾಗಿದರೂ ಬಿಡದೆ ಅವರನ್ನು ಹಿಂಬಾಲಿಸಿ ಹೋದ ಆಶ್ರಯ ನಿವಾಸಿಗಳು ಕೊನೆಗೂ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಅವರು ಸಮಾಧಾನದಿಂದ ಮನವಿ ಸ್ವೀಕರಿಸಿ ಬಳಿಕ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ತಕ್ಷಣ ಇವರ ಸಮಸ್ಯೆ ಪರಿಹರಿಸಿ ಹಕ್ಕು ಪತ್ರ ನೀಡಬೇಕು ಎಂದು ಸೂಚಿಸಿದರು.