ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಸಿಲಿಕಾನ್ ವ್ಯಾಲೀ ಬ್ಯಾಂಕ್ ಕುಸಿದು ಬಿದ್ದಿರೋ ವಿದ್ಯಮಾನ ಜಾಗತಿಕವಾಗಿ ಹಲವು ಕೋಲಾಹಲಗಳನ್ನು ಸೃಷ್ಟಿಸಿದೆ. ಮುಖ್ಯವಾಗಿ ನವೋದ್ದಿಮೆ ಕ್ಷೇತ್ರಕ್ಕೆ ಇದು ದೊಡ್ಡ ಆಘಾತವನ್ನು ಸೃಷ್ಟಿಸಿದ್ದು ಭಾರತೀಯ ನವೋದ್ದಿಮೆಗಳೂ ಈ ಸಾಲಿನಲ್ಲಿವೆ. ಸಿಲಿಕಾನ್ ವ್ಯಾಲೀ ಬ್ಯಾಂಕಿನಲ್ಲಿ 1 ಬಿಲಿಯನ್ ಡಾಲರುಗಳಷ್ಟು ಹಣವನ್ನು ಭಾರತೀಯ ನವೋದ್ದಿಮೆಗಳು ಠೇವಣಿ ಹೊಂದಿವೆ ಎಂದು ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಳುಗಿರುವುದರಿಂದ ಈ ನವೋದ್ದಿಮೆಗಳು ಕಷ್ಟಕ್ಕೆ ಸಿಲುಕಲಿದ್ದು ಭಾರತೀಯ ನವೋದ್ದಿಮೆಗಳಿಗೆ ಭಾರತೀಯ ಬ್ಯಾಂಕುಗಳು ಹೆಚ್ಚಿನ ಸಾಲ ಸೌಲಭ್ಯ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಸ್ವಿಬಿ ಕುಸಿತದ ನಂತರ 460 ನವೋದ್ದಿಮೆಗಳನ್ನು ರಾಜೀವ್ ಚಂದ್ರಶೇಖರ್ ಬೇಟಿ ಮಾಡಿದ್ದಾರೆ. ಇವುಗಳಲ್ಲಿಎಸ್ವಿಬಿಯಲ್ಲಿ ಹಣ ತೊಡಗಿಸಿದ ನವೋದ್ದಿಮೆಗಳೂ ಸೇರಿವೆ. ಅವರೊಂದಿಗೆ ಚರ್ಚಿಸಿದ ಸಚಿವರು ಸಲಹೆಗಳನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ರವಾನಿಸಿರುವುದಾಗಿ ಹೇಳಿದ್ದಾರೆ. ಭಾರತೀಯ ಬ್ಯಾಂಕ್ಗಳು SVB ಯಲ್ಲಿ ಹಣವನ್ನು ಹೊಂದಿರುವ ಸ್ಟಾರ್ಟ್ಅಪ್ಗಳಿಗೆ ಠೇವಣಿ-ಬೆಂಬಲಿತ ಕ್ರೆಡಿಟ್ ಲೈನ್ ಅನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದವರು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.