ಹೊಸದಿಗಂತ ವರದಿ ಹುಬ್ಬಳ್ಳಿ:
ವಿದ್ಯಾರ್ಥಿ ವೇತನ ಹಾಗೂ ಯುಯುಸಿಎಂಎಸ್ ತಂತ್ರಾಂಶ ಲೋಪದೋಷಗಳ ಸರಿಪಡಿಸಲು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿದ್ಯಾನಗರ ಕಿಮ್ಸ್ ಆಸ್ಪತ್ರೆ ಎದುರು ರಸ್ತೆ ತಡೆದು ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ಧೋರಣೆ ಖಂಡಿಸಿದರು. ವಿದ್ಯಾರ್ಥಿ ಪರಿಷತ್ ಗುಡಿಗಿದರೆ ವಿಧಾನ ಸೌಧ ನಡಗುವುದು, ತಕ್ಷಣ ಬಾಕಿ ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ತಂತ್ರಾಂಶದಲ್ಲಿ ಹಲವಾರು ಲೋಪದೋಷಗಳಿವೆ. ತಕ್ಷಣ ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಪದವಿ ಪ್ರಥಮ ವರ್ಷ ಮುಗಿಸಿದ ವಿದ್ಯಾರ್ಥಿಗಳ ಮೌಲ್ಯ ಮಾಪನ ಮಾಡದೆ ನಿರ್ಲಕ್ಷ್ಯ ತೊರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ.
ಬಹುತೇಕ ವಿದ್ಯಾರ್ಥಿಗಳು ದೊರೆಯಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ಸ್ವಲ್ಪ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಸೂಕ್ತವಾಗಿ ಪರಿಹರಿಸಬೇಕು ಎಂದು ಆಗ್ರಹಿಸಿದರು. ರಸ್ತೆಯಲ್ಲಿ ಟಾಯರ್ ಗೆ ಬೆಂಕಿ ಹಚ್ಚಲು ವಿದ್ಯಾರ್ಥಿಗಳು ಮುಂದಾದಾಗ ಪೊಲೀಸರು ತಡೆದರು.
ಎಬಿವಿಪಿ ಮಹಾನಗರ ಕಾರ್ಯದರ್ಶಿ ಶಿವಕುಮಾರ ಮಟ್ಟಿ, ಪೃಥ್ವಿ ಕುಮಾರ, ಹಿತೇಶ, ನಿಶಾ ಕಾಂಟೆ, ರಾಘವೇಂದ್ರ, ಶ್ರೇಯಾ, ಪ್ರೇಮಾ ಹಾಗೂ ಪುಷ್ಪಾ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಸಿದ್ದರು.