ಹೊಸದಿಗಂತ ವರದಿ, ಬೀದರ್:
ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿವೀರ್ ನೇಮಕಾತಿಗಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಯುವಕರಿಂದ ಉತ್ಸಾಹಕರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಗ್ನಿವೀರ ಸೇನಾ ನೇಮಕಾತಿಗೆ ರಾಜ್ಯದ ಜೊತೆಗೆ ನೆರೆ ರಾಜ್ಯಗಳಾದ ತೆಲಂಗಾಣ, ಮಹಾರಾಷ್ಟ್ರದಿಂದ ಯುವಕರು ಬೀದರಿಗೆ ಆಗಮಿಸಿದ್ದು ನಿತ್ಯ ಸುಮಾರು 4-5 ಸಾವಿರ ಯುವಕರು ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ.
ಈ ಸಂದರ್ಭದಲ್ಲಿ ಹೊಸದಿಗಂತ ಜೊತೆ ಮಾತನಾಡಿದ ಯುವಕರು ಅಗ್ನಿವೀರ ನೇಮಕಾತಿ ನಮ್ಮೆಲ್ಲರಿಗೂ ಆಶಾದಾಯಕವಾಗಿದೆ. ದೇಶ ಸೇವೆಯ ಜೊತೆಗೆ ಉದ್ಯೋಗ ಖಾತ್ರಿಯಾದರೆ ನಮ್ಮವರಿಗೂ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.
ಆರ್ ಎಸ್ ಎಸ್ ನಿಂದ ಊಟೋಪಚಾರ:
ನೇಮಕಾತಿಗಾಗಿ ಬರುತ್ತಿರುವ ಯುವಕರಿಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಕೇಶವ ಕಾರ್ಯ ಸಂವರ್ಧನ ಸಮಿತಿ ಆಶ್ರಯದಲ್ಲಿ ಊಟ, ಉಪಾಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ತುಂಬಾ ಚಳಿ ಇರುವ ಕಾರಣ ರಸ್ತೆ ಪಕ್ಕದಲ್ಲಿ ಯುವಕರು ಮಲಗುತ್ತಿರುವುದು ಗಮನಿಸಿ ದೊಡ್ಡ ಪೆಂಡಾಲ ಹಾಕಿಸಿ ವಸತಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.
ಶ್ರೀಸಾಯಿ ಆದರ್ಶ ಶಾಲೆಯ ಪ್ರಾಂಗಣದಲ್ಲಿ ನೇಮಕಾತಿಯ ಕೊನೆಯ ದಿನದವರೆಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ಸಂಜೆ ಊಟದ ಸೌಲಭ್ಯ ಕಲ್ಪಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ