ರಾಸಾಯನಿಕ ಮಿಶ್ರಿತ ನೀರು ಹರಿದು ನೂರಾರು ಮೀನುಗಳ ಮಾರಣಹೋಮ

ಹೊಸದಿಗಂತ ಕುಶಾಲನಗರ:

ಹರಿಯುವ ತೋಡಿಗೆ ರಾಸಾಯನಿಕ ನೀರು ಮಿಶ್ರಗೊಂಡ ಕಾರಣ ನೂರಾರು ಮೀನುಗಳು ಮೃತಪಟ್ಟ ಘಟನೆ ಕಂಬಿಬಾಣೆ ಗ್ರಾ.ಪಂ. ವ್ಯಾಪ್ತಿಯ ಅತ್ತೂರು ನಲ್ಲೂರು ವ್ಯಾಪ್ತಿಯ ಕುಟ್ಟಿಗೇರಿ ಪೈಸಾರಿನಲ್ಲಿ ನಡೆದಿದೆ.

ಚಿಕ್ಲಿಹೊಳೆ ಅಣೆಕಟ್ಟೆಗೆ ಸೇರ್ಪಡೆಯಾಗುವ ನೈಸರ್ಗಿಕ ತೋಡಿಗೆ ರಾಸಾಯನಿಕ ಮಿಶ್ರಗೊಂಡ ನೀರು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಮೀನುಗಳು ಸೇರಿದಂತೆ ಜಲಚರಗಳು ನೂರಾರು ಸಂಖ್ಯೆಯಲ್ಲಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಮೂರು ದಿನಗಳ ಹಿಂದೆ ವ್ಯಾಪ್ತಿಯ ಆಶಾ ಕಾರ್ಯಕರ್ತೆ ಕಂಬಿಬಾಣಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮತ್ತು ಅಧ್ಯಕ್ಷರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತ ಮಂಡಳಿಯವರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಂತರ ಮೀನುಗಳು ಮೃತಪಟ್ಟಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅದೇ ರೀತಿ ಸ್ಥಳೀಯ ಸಾರ್ವಜನಿಕರು ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಅರವಿಂದ, ಕಂಬಿಬಾಣೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಧಾ, ಅಭಿವೃದ್ಧಿ ಅಧಿಕಾರಿ ಮಧುಮತಿ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್ , ಸಿಬ್ಬಂದಿ ವರ್ಗ ಹಾಗೂ ಕಂಬಿಬಾಣೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ಸಮೀಪದ ತೋಟಗಳಿಂದ ತೋಡಿಗೆ ರಾಸಾಯನಿಕ ನೀರು ಹರಿದಿರುವ ಶಂಕೆಯಿದ್ದು, ಎಲ್ಲಿಂದ ರಾಸಾಯನಿಕ ಹರಿದು ಬಂದಿದೆ ಎಂಬುದು ಪತ್ತೆಯಾಗಿಲ್ಲ.

ಈ ಸಂಬಂಧ ಮೀನುಗಾರಿಕೆ ಇಲಾಖೆಯ ಮುಖೇನ ಚಿಕ್ಲಿಹೊಳೆ ಅಣೆಕಟ್ಟೆಯಲ್ಲಿ ಮೀನು ಹಿಡಿಯುವ ಟೆಂಡರ್ ಪಡೆದ ಗುತ್ತಿಗೆದಾರರು ಸಹ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌. ಸ್ಧಳಕ್ಕೆ ತೆರಳಿದ ಅಧಿಕಾರಿಗಳು ಸತ್ತ ಮೀನುಗಳನ್ನು ಪರೀಕ್ಷೆಗಾಗಿ ಸಂಬಂಧಿಸಿದ ಇಲಾಖೆಯ ಮೂಲಕ ಮೈಸೂರು ಮತ್ತು ಮಂಗಳೂರಿನ ಪ್ರಯೋಗಾಲಯಗಳಿಗೆ ರವಾನಿಸಿದ್ದಾರೆ. ತೋಡಿನಲ್ಲಿ ಕಡಿಮೆ ಪ್ರಮಾಣದ ನೀರು ಇದ್ದುದರಿಂದ ಭಾರೀ ಅನಾಹುತವಾಗುವುದು ತಪ್ಪಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!