ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸರು ನನ್ನ ಬಳಿಯ ಫೋನ್ ಕಿತ್ತುಕೊಳ್ಳಲು ಯತ್ನಿಸಿದರು. ನಾನು ಕಾಂತಾರದ ದೈವದ ರೀತಿಯಲ್ಲಿ ಕೆಲವು ಸಲ ವರ್ತನೆ ಮಾಡಿದೆ. ಹೀಗಾಗಿ ನನ್ನ ಪೋನ್ ಕಿತ್ತುಕೊಳ್ಳಲು ಪೊಲೀಸರಿಗೆ ಆಗಲಿಲ್ಲ ಎಂದು ಮಾಜಿ ಸಚಿವ, ಎಂಎಲ್ಸಿ ಸಿಟಿ ರವಿ ಹೇಳಿದರು. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮೇಲೆ ಹಲ್ಲೆ ಆಗಿರುವುದಕ್ಕೆ ವಿಡಿಯೋ ಇದೆ. ನನ್ನ ಮೇಲೆ ಮಾಡಿದ ಆರೋಪ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಇದ್ದಂತೆ. ನನ್ನ ಮೇಲಿನ ಆರೋಪಕ್ಕೆ ಯಾವುದೇ ದಾಖಲೆ ಇಲ್ಲ ಎಂದರು.
ರಾತ್ರಿ ಸುತ್ತಾಡುವಾಗ ಪೊಲೀಸರು ವಾಕಿ-ಟಾಕಿಯಲ್ಲಿ ಕಡಿಮೆ ಮಾತನಾಡುತ್ತಿದ್ದರು, ಪೋನ್ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದರು. ಕೆಲವು ಕರೆ ಸೇವ್ ಆಗಿರುವ ನಂಬರಗಳಿಂದ, ಕೆಲವು ಕರೆ ನಂಬರಗಳಿಂದ ಬರುತ್ತಿದ್ದವು. ನನ್ನ ಜೊತೆ ಸ್ಕಾರ್ಪಿಯೋದಲ್ಲಿ ರಾಮದುರ್ಗ ಡಿವೈಎಸ್ಪಿ ಚಿದಂಬರ್, ಬೆಳಗಾವಿ ಮಾರ್ಕೆಟ್ ಠಾಣೆ ಎಸ್ಐ ಗಂಗಾಧರ್, ಕಿತ್ತೂರು ಎಸ್ಐ ಇದ್ದರು ಎಂದು ತಿಳಿಸಿದರು.
ಈಗಲೂ ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಬೆಳಗಾವಿ ಆಯುಕ್ತ, ಎಸ್ಪಿ ಮತ್ತು ಇನ್ನತರೆ ಅಧಿಕಾರಿಗಳು ನನ್ನ ಜೊತೆ ನಡೆದುಕೊಂಡ ರೀತಿ ನಿಗೂಢವಾಗಿತ್ತು. ಪೊಲೀಸರ ಅಧಿಕೃತ ಫೋನ್, ಖಾಸಗಿ ಫೋನ್ ಕಾಲ್ ಬಗ್ಗೆ ತನಿಖೆ ಆಗಲಿ. ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಗುಂಡು ಹೊಡೆದು ಸಾಯಿಸಲು ಪ್ಲಾನ್ ಮಾಡಿದ್ದರಾ ಅಂತ ನನಗೆ ಅನುಮಾನವಿದೆ. ಏನೋ ಸಂಚು ಮಾಡಿದ್ದರು ಎಂಬ ಬಗ್ಗೆ ನನಗೆ ಅನುಮಾನ ಇದೆ. ಗೃಹ ಸಚಿವರ ಹಿಡಿತದಲ್ಲೇ ಗೃಹ ಇಲಾಖೆ ಇದೆಯಾ ಎಂಬ ಅನುಮಾನ ಇದೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದರು.