ಹೊಸದಿಗಂತ ವರದಿ ಹುಬ್ಬಳ್ಳಿ:
ದೇಶ ಹಾಗೂ ಧರ್ಮ ಉಳಿಸಬೇಕು ಎಂಬುದು ನನ್ನ ಆಸೆಯಾಗಿದ್ದು, ಧರ್ಮ ರಕ್ಷಕ ಸಂಘಟನೆ ನಿಷೇಧಿಸುತ್ತೇವೆ ಎನ್ನುವ ನೂರು ಪ್ರಣಾಳಿಕೆ ಬೇಕಾದರೂ ಸುಡುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜರಂಗದಳ ರಾಷ್ಟ್ರ, ಧರ್ಮ ರಕ್ಷಣೆ ಮಾಡುತ್ತಿದೆ.
ಯಾವುದೇ ಸಾಮಾನ್ಯ ಜ್ಞಾನ ಇಲ್ಲದೆ ಕಾಂಗ್ರೆಸ್ನವರು ಪ್ರಣಾಳಿಕೆ ಸಿದ್ಧಪಡಿಸಿ, ಅದರಲ್ಲಿ ಬಜರಂಗದಳ ನಿಷೇಧದ ವಿಷಯ ಸೇರಿಸಿದ್ದಾರೆ. ಕಾಂಗ್ರೆಸ್ನವರು ಈ ಪ್ರಣಾಳಿಕೆಯನ್ನು ತಕ್ಷಣ ವಾಪಸ್ ಪಡೆಯಬೇಕು.
ನಮ್ಮ ಸರ್ಕಾರ ಈಗಾಗಲೇ ನಿಷೇಧಿಸಿರುವ ಪಿಎಫ್ಐ ಸಂಘಟನೆಯನ್ನು ಮತ್ತೆ ನಿಷೇಧಿಸುತ್ತೇವೆ ಎನ್ನುತ್ತಿದ್ದಾರೆ. ಬರಿ ಬಜರಂಗದಳದ ಹೆಸರು ಹೇಳು ಧೈರ್ಯ ಅವರಿಗಿಲ್ಲ. ಅದಕ್ಕಾಗಿ ಪಿಎಫ್ಐ ಹೆಸರು ಸೇರಿಸಿಕೊಂಡಿದ್ದಾರೆ. ಅವರು ಹೇಡಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಜರಂಗದಳದಲ್ಲಿ ರಾಷ್ಟ್ರೀಯವಾದಿಗಳಿದ್ದಾರೆ. ಅವರು ಸುಮ್ಮನೇ ಕುಳಿತಿಲ್ಲ. ಕಾಂಗ್ರೆಸ್ನ ನಿಲುವು ಖಂಡಿಸಿ ಹನುಮಾನ್ ಚಾಲೀಸ ಪಠಣ ಮಾಡಿ ಶಾಂತಿಯುತವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಮುಂದಿನ ದಿನಗಲ್ಲಿ ಏನಾಗುತ್ತದೆ ನೋಡಿ ಎಂದರು.