ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ್ದು, ಕಾಂಗ್ರೆಸ್ಗೆ ಬೆಂಬಲ ನೀಡಿದ ಕರ್ನಾಟಕ ಜನರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನನಗೆ ಗೆಲ್ಲಲು ಆಗಿಲ್ಲ. ಜನರ ತೀರ್ಪಿಗೆ ಗೌರವ ಕೊಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನನ್ನನ್ನು ಸೋಲಿಸಲು ಹೋಗಿದ್ದ ವ್ಯಕ್ತಿಗಳು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದವರ ವಿರುದ್ಧ ಚಾಲೆಂಜ್ ಮಾಡಿ ಫೇಸ್ ಮಾಡಿದ್ದೇನೆ ಎಂದರು.
ನಾನು ಸೋತಿದ್ದೇನೆ ಅನ್ನುವ ದುಃಖ ನನಗಿಲ್ಲ. ಲಿಂಗಾಯತ ಸಮುದಾಯ ಕಡೆಗಣಿಸಿದ್ರು ಅನ್ನೋದರ ಪರಿಣಾಮ ಈಗ ಕಿತ್ತೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಣಿಸುತ್ತಿದೆ. ಒಬ್ಬರಿಗೆ ಪೆಟ್ಟು ಕೊಡಲು ಹೋಗಿ ಇಡೀ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ. ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದು, ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ. 70 ವರ್ಷವಾದ ಮೇಲೆ ನಾನು ಚುನಾವಣಾ ರಾಜಕೀಯದಲ್ಲಿ ಇರಲ್ಲ. ನನಗೀಗ 67 ವರ್ಷ. ಮುಂದೆ ಏನಾಗುತ್ತೆ ನೋಡೋಣ. ಬಿಜೆಪಿ ದಕ್ಷಿಣ ಭಾರತದಲ್ಲಿ ಹೇಗೆ ಅವಸಾನ ಆಗುತ್ತಿದೆ ಅಂತಾ ಗೊತ್ತಾಗುತ್ತಿದೆ. ನಾನೇ ಬೆಳೆಸಿದ್ದ ಬಿಜೆಪಿ ಮೈಂಡ್ಸೆಟ್ ಚೇಂಜ್ ಮಾಡಲು ಆಗಿಲ್ಲ ಎಂದರು.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ನಮ್ಮ ಒಳಹೊಡೆತ ಕೆಲಸ ಆಗಿಲ್ಲ. ಏನಾಯ್ತು ಅಂತಾ ಬೂತ್ವೈಸ್ ಪರಿಶೀಲನೆ ಮಾಡುತ್ತೇನೆ. ಕೆಲವೇ ವ್ಯಕ್ತಿಗಳ ಕುತಂತ್ರದಿಂದ ಇದೆಲ್ಲಾ ಆಗುತ್ತಿದೆ. ಮುಂದೆ ಲೋಕಸಭಾ ಚುನಾವಣೆ ಬರುತ್ತಿದೆ. ಇದರ ಪರಿಣಾಮ ದೇಶಾದ್ಯಂತ ಆಗುತ್ತೆ. ಲಿಂಗಾಯತ ಬೆಲ್ಟ್ ಮೇಲೆ ಇಂಪ್ಯಾಕ್ಟ್ ಆಗಿದ್ದು, ಲಿಂಗಾಯತರು ಕಾಂಗ್ರೆಸ್ ಪರ ನಿಂತಿದ್ದು, ಗೆಲುವಿಗೆ ಒಂದು ಕಾರಣ ಎಂದು ಶೆಟ್ಟರ್ ಹೇಳಿದ್ದಾರೆ.