ಹೊಸದಿಗಂತ ವರದಿ,ಕಲಬುರಗಿ:
ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ ವಿಚಾರವಾಗಿ ಅಫಜಲಪುರ ಪಟ್ಟಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು. ನನಗೂ ಆ ವಿಷಯದ ಬಗ್ಗೆ ಯಾರೋ ಹೇಳಿದ್ದಾರೆ. ನಾಳೆ ಸಾವರ್ಕರ್ ಭಾವಚಿತ್ರ ಅನಾವರಣ ನೋಡಿ ಅದರ ಬಗ್ಗೆ ಮಾತನಾಡುವುದಾಗಿ ಹೇಳಿದರು.
ಇನ್ನೂ ಮಗನಿಗೆ ಸಿದ್ದರಾಮಯ್ಯ ಅಂತ ಅಪ್ಪಟ ಹಿಂದು ಹೆಸರು ಇಟ್ಟಿರುವ ಅವರ ತಂದೆಯ ಆತ್ಮ ವಿಲವಿಲ ಅಂತಿದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ. ಹಿಂದು ಪರವಾಗಿಯೂ ಮಾತನಾಡುತ್ತೇನೆ, ಬೇರೆ ಧರ್ಮಗಳ ಪರವಾಗಿಯೂ ಮಾತನಾಡುತ್ತೇವೆ. ನಾನು ಸಂವಿಧಾನದ ಪ್ರಕಾರ ಮಾತನಾಡಬೇಕಾ? ಇಲ್ಲವೇ ಇವರು ಹೇಳಿದಂಗೆ ಮಾತನಾಡಬೇಕಾ? ಎಂದು ಪ್ರಶ್ನಿಸಿದರು.
ನಾನು ಮುಸ್ಲಿಂ ಪರವಾಗಿ ಮಾತನಾಡಿದರೆ ಸಿದ್ದರಾಮುಲ್ಲಾ ಖಾನ್ ಎಂದು ಕರೆಯುತ್ತಾರೆ, ಜಾತಿ ವಿಷ ಬೀಜ ಬಿತ್ತುತ್ತಿರುವುದು ಬಿಜೆಪಿ ಹೊರತಾಗಿ ಕಾಂಗ್ರೆಸ್ ಅಲ್ಲ, ಜಾತಿ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿರುವುದು ಬಿಜೆಪಿ, ಎಲ್ಲರೂ ಮನುಷ್ಯರೆಂದು ನಂಬಿದವರು ನಾವು ಇವರಿಗೆ ಆರ್.ಎಸ್.ಎಸ್ ನವರು ಮಾತ್ರ ಮನುಷ್ಯರಾಗಿ ಕಾಣುತ್ತಿದ್ದಾರೆ ಇತರರು ಅಲ್ಲ ಎಂದು ಸಿಟಿ ರವಿ,ಗೆ ತಿರುಗೇಟು ನೀಡಿದರು.