ಹೊಸದಿಗಂತ ವರದಿ ಧಾರವಾಡ :
ಕೃಷಿ ನಾಶವಾದರೆ ದೇಶಕ್ಕೆ ದುರ್ಭಿಕ್ಷೆ ಕಟ್ಟಿಟ್ಟಬುತ್ತಿ. ಹೀಗಾಗಿ ಈ ಕ್ಷೇತ್ರ ಉಳಿವಿಗೆ ಕೃಷಿಕರು, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ವಿದ್ಯಾರ್ಥಿಗಳು ಶ್ರಮಿಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಕರೆ ನೀಡಿದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ನಗರದ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಂಡ ಅಗ್ರಿವಿಷನ್ ದಕ್ಷಿಣ ಭಾರತ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕೃಷಿ ವಿದ್ಯಾರ್ಥಿಗಳು ಉದ್ಯೋಗ ಅರಸಿ ವಲಸೆ ಹೋಗದಂತೆ ಅಗ್ರಿ ಸ್ಟಾರ್ಟ್ಅಪ್ ಸ್ಥಾಪಿಸಿ ದುಡಿಯುವ ನೂರಾರು ಕೈಗಳಿಗೆ ಉದ್ಯೋಗ ಒದಗಿಸುವಂತೆ ಸಲಹೆ ನೀಡಿದರು.
ಈ ವೇಳೆ ಸರ್ಕಾರ ಜಾರಿಗೆ ತಂದ ಯೋಜನೆಗಳು ರೈತರಿಗೆ ಮತ್ತು ಅವರ ಮಕ್ಕಳಿಗೆ ತಲುಪುತ್ತಿಲ್ಲ. ಹೀಗಾಗಿ ಕೃಷಿ ವಿದ್ಯಾರ್ಥಿಗಳು ಸರ್ಕಾರ, ಕೃವಿವಿ ಹಾಗೂ ರೈತರ ನಡುವೆ ರಾಯಭಾರಿಗಳಾಗುವಂತೆ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.
ಸಮ್ಮೇಳನದಲ್ಲಿ ಕೆ.ಎಸ್.ಉತ್ಪರ್ಷ, ಮಣಿಕಂಠ ಕಳಸ, ಪೂಜಿತಾ ಗದ್ದೆಮನಿ, ಶ್ರೀನಿವಾಸ, ಶಿವಪ್ರಕಾಶ ಸೇರಿದಂತೆ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದ 1500 ಪ್ರತಿನಿಧಿಗಳು ಪಾಲ್ಗೊಂಡಿದ್ದರು.