ಹೊಸದಿಗಂತ ವರದಿ ಚಿತ್ರದುರ್ಗ:
ಗಾಂಜಾ ಮಾರಾಟ ಹಾಗೂ ಗಾಂಜಾ ಸೇವಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಜನ ಆರೋಪಿಗಳನ್ನು ಬಂಧಿಸಿ, ಸುಮಾರು ೮೦ ಸಾವಿರ ರೂ. ಮೌಲ್ಯದ ೮ ಕೆ.ಜಿ. ಒಣಗಿದ ಗಾಂಜಾ ಸೊಪ್ಪು, ೨ ಸಾವಿರ ರೂ. ನಗದು ಹಾಗೂ ಒಂದು ಆಟೋರಿಕ್ಷಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳಾದ ಸೋಮಶೇಖರ್ ಯಾನೆ ಡೆಡ್ಲಿ ಸೋಮ, ಭರತ್ ಯಾನೆ ಬೆಣ್ಣೆ ಎಂಬ ಇಬ್ಬರು ಆರೋಪಿಗಳು ಗಾಂಜಾ ಮಾರಾಟದಲ್ಲಿ ನಿರತರಾಗಿದ್ದರು. ದಾದಾಪೀರ್ ಯಾನೆ ದಾದು, ಬಾಸ್ಕರಾಚಾರಿ, ದಸ್ತಗೀರ್, ಗೌಸ್ಪೀರ್, ಬಾಬಾ ಪಕೃದ್ದೀನ್, ಸಾತ್ವಿಕ್ ಎಂಬ ಆರೋಪಿಗಳು ಗಾಂಜಾ ಸೇದುವಲ್ಲಿ ನಿರತರಾಗಿದ್ದರು ಎಂದು ವಿವರಿಸಿದರು.
ಆರೋಪಿಗಳು ನಗರದ ಜಟ್ಪಟ್ ನಗರದಿಂದ ಕುರುಬರ ಗುಡ್ಡಕ್ಕೆ ಹೋಗುವ ರಸ್ತೆಯ ಸ್ಮಶಾನದ ಬಳಿ ಗಾಂಜಾ ಮಾರಾಟ ಹಾಗೂ ಗಾಂಜಾ ಸೇವನೆಯಲ್ಲಿ ತೊಡಗಿದ್ದರು. ಈ ಕುರಿತು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದರು.
ಆರೋಪಿಗಳ ಪೈಕಿ ಸೀನ ಯಾನೆ ಜಪಾನ್ ಸೀನ, ಸೋಮಶೇಖರ್ ಯಾನೆ ಡೆಡ್ಲಿ ಸೋಮ ಹಾಗೂ ಭರತ್ ಯಾನೆ ಬೆಣ್ಣೆ ಇವರುಗಳು ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಬಳ್ಳಾರಿ ಮಾರ್ಗವಾಗಿ ರೈಲಿನಲ್ಲಿ ಹೋಗಿ ಅಲ್ಲಿ ಗೋವಿಂದಪ್ಪ ಎಂಬುವವರ ಬಳಿ ಗಾಂಜಾ ಸೊಪ್ಪನ್ನು ಖರೀದಿಸಿ, ಬ್ಯಾಗ್ನಲ್ಲಿ ಹಾಕಿಕೊಂಡು ಚಿತ್ರದುರ್ಗಕ್ಕೆ ಬಂದು ಜಟ್ಪಟ್ ನಗರದ ಬಳಿಯ ಸ್ಮಶಾನ, ಗುಡ್ಡ ಸೇರಿದಂತೆ ವಿವಿಧ ನಿರ್ಜನ ಪ್ರದೇಶಗಳಿಗೆ ಗ್ರಾಹಕರನ್ನು ಕರೆಯಿಸಿಕೊಂಡು ಸಣ್ಣ ಸಣ್ಣ ಕವರ್ಗಳಲ್ಲಿ ಗಾಂಜಾ ಸೊಪ್ಪು ತುಂಬಿ ೪೦೦ ರೂ.ಗಳಿಗೆ ೧ ಪ್ಯಾಕೇಟ್ನಂತೆ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು.