ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಶ್ರೀಅಯ್ಯಪ್ಪ ಸ್ವಾಮಿ ದರುಶನಕ್ಕೆ ವಿವಿಧ ರಾಜ್ಯಗಳಿಂದ ಭಕ್ತರು ಕೇರಳದತ್ತ ಹೊರಟಿದ್ದು, ಈ ಸಮಯದಲ್ಲಿ ರಾಜ್ಯದಿಂದತೆರಳಲಿರುವ ಭಕ್ತಾದಿಗಳಿಗೆ ಆರೋಗ್ಯ ಇಲಾಖೆ ಮಹತ್ವದ ಸಲಹೆಯೊಂದನ್ನು ನೀಡಿದೆ .
ಶ್ರೀ ಅಯ್ಯಪ್ಪ ಮಾಲಧಾರಿಗಳಲ್ಲಿ ಉಸಿರಾಟದ ತೊಂದರೆ, ಹೃದ್ರೋಗ, ಅಸ್ತಮಾ ಸೇರಿ ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವವರು ಬೆಟ್ಟ ಏರಬಾರದು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಗಂಟಲು ನೋವಿನಂತಹ ರೋಗ ಲಕ್ಷಣಗಳನ್ನು ಹೊಂದಿರುವ ಯಾತ್ರಾರ್ಥಿಗಳು ಹೆಚ್ಚು ಪ್ರಯಾಣ ಮಾಡಬಾರದು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ವಿವಿಧ ಕಾಯಿಲೆಗಳನ್ನು ಹೊಂದಿರುವವರು ವೈದ್ಯರು ಸೂಚಿಸಿದ ಔಷಧಗಳು ಮತ್ತು ಚಿಕಿತ್ಸಾ ದಾಖಲೆಗಳನ್ನು ತಮ್ಮೊಂದಿಗೆ ಸದಾ ಹೊಂದಿರಬೇಕು ಎಂದು ಇಲಾಖೆ ಸೂಚಿಸಿದೆ.
ತೀರ್ಥಯಾತ್ರೆಯ ಸಮಯದಲ್ಲಿ ನಿಯಮಿತವಾಗಿ ಔಷಧಗಳನ್ನು ಸೇವಿಸಬೇಕು. ಆರೋಗ್ಯಕ್ಕೆ ಸಂಬಂಧಿತ ಸಮಸ್ಯೆ ಇರುವ ಯಾತ್ರಾರ್ಥಿಗಳು ತೀರ್ಥಯಾತ್ರೆಗೆ ಮುಂಚಿತವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬೆಟ್ಟ ಏರಲಿಕ್ಕೆ ದೈಹಿಕ ಸದೃಢತೆಯನ್ನು ಹೊಂದಲು ಯಾತ್ರೆಯ ಎರಡು ವಾರ ಮೊದಲು ದಿನಕ್ಕೆ ಕನಿಷ್ಠ ಅರ್ಧ ಗಂಟೆ ಓಟ ಅಥವಾ ನಡಿಗೆ ರೂಢಿಸಿಕೊಳ್ಳುವುದು ಉತ್ತಮ ಎಂದು ಇಲಾಖೆ ತಿಳಿಸಿದೆ.