ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಇನ್ನು ಆರುದಿನಗಳಲ್ಲಿ ಮರುಚುನಾವಣೆ ನಡೆಸಬೇಕು ಇಲ್ಲವೇ ಇಡೀ ಪಾಕಿಸ್ತಾನದ ನಾಗರೀಕರೊಂದಿಗೆ ಇಸ್ಲಾಮಾಬಾದ್ ಗೆ ಲಗ್ಗೆಯಿಡುವುದಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಪಾಕಿಸ್ತಾನ ಸರ್ಕಾರವನ್ನು ʼಆಮದು ಮಾಡಿಕೊಂಡ ಸರ್ಕಾರʼ ಎಂದು ಟೀಕಿಸಿದ್ದಾರೆ. ಪಿಟಿಐ ಪಕ್ಷದ ರ್ಯಾಲಿಯನ್ನು ತಡೆಯಲು ಸರ್ಕಾರವು ಬಳಸುತ್ತಿರುವ ʼತಂತ್ರಗಳನ್ನು ಖಾನ್ ಖಂಡಿಸಿದ್ದಾರೆ.
ಏಪ್ರಿಲ್ ನಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡನಂತರ ಇಮ್ರಾನ್ ಖಾನ್ ಹೊಸ ಚುನಾವಣೆಗಾಗಿ ಒತ್ತಾಯಿಸಲು ಇಸ್ಲಾಮಾಬಾದ್ನ ಡಿ-ಚೌಕ್ ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು. ಆದರೆ ಪಾಕಿಸ್ತಾನ ಸರ್ಕಾರ ಇದನ್ನು ನಿರ್ಬಂಧಿಸಿತು. ಈ ಕುರಿತು ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡುವಂತೆ ಹಾಗೂ ಇಮ್ರಾನ್ ಖಾನ್ ರನ್ನು ಬಂಧಿಸದೇ ಇರುವಂತೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿತು.
ಈ ಹಿನ್ನೆಲೆಯಲ್ಲಿ ಬುಧವಾರ ಸಾವಿರಾರು ಸಂಖ್ಯೆಯಲ್ಲಿ ನೆರೆದ ಪ್ರತಿಭಟನಾಕಾರರು ಹಾಗೂ ಪೋಲೀಸರ ನಡುವೆ ಘರ್ಷಣೆ ನಡೆಯಿತು. ಘರ್ಷಣೆ ಭುಗಿಲೆದ್ದ ಕೂಡಲೇ, ನೂರಾರು ಪಿಟಿಐ ಕಾರ್ಯಕರ್ತರು ಮತ್ತು ಅದರ ಕೆಲವು ಮುಖಂಡರನ್ನು ಪೊಲೀಸರು ಬಂಧಿಸಿ ʼಆಜಾದಿ ಮಾರ್ಚ್ʼಅನ್ನು ಸ್ಥಗಿತಗೊಳಿಸಿದರು. ಪ್ರಸ್ತುತ ಗುರುವಾರ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಈ ನಡುವೆ ಇಮ್ರಾನ್ ಖಾನ್ ಪ್ರತಿಭಟನೆ ವಾಪಸ ಪಡೆದಿದ್ದಾರೆ ಹಾಗೂ ಆರುದಿನಗಳಲ್ಲಿ ಮರು ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಇಲ್ಲದಿದ್ದಲ್ಲಿ ಮತ್ತೆ ಇಸ್ಲಾಮಾಬಾದ್ ಗೆ ಲಗ್ಗೆಯಿಡುವುದಾಗಿ ಹೇಳಿದ್ದಾರೆ