ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಶೇ.95ರಷ್ಟು ದೇಹದ ಸ್ವಾಧೀನ ಕಳೆದುಕೊಂಡ ಮಹಾರಾಷ್ಟ್ರದ ವಕೀಲರೊಬ್ಬರು ಸ್ವಾವಲಂಬಿ ಜೀವನ ಮಾಡಿ ಮಾದರಿಯಾಗಿದ್ದಾರೆ.
ಔರಂಗಾಬಾದ್ನ ಪಿಸಾದೇವಿ ಪ್ರದೇಶದಲ್ಲಿ ವಾಸಿಸುವ ವಕೀಲ ಉದಯ್ ಚವ್ಹಾಣ್ ಎಂಬುವವರೇ ಸ್ವಾವಲಂಬಿ ಜೀವನ ಕಟ್ಟಿಕೊಂಡವರು.
2019ರ ಫೆಬ್ರವರಿಯಲ್ಲಿ ಕುಟುಂಬದೊಂದಿಗೆ ರಾಯಗಢಕ್ಕೆ ಪ್ರಯಾಣಿಸುತ್ತಿದ್ದಾಗ ಉದಯ್ ಚವ್ಹಾಣ್ ಅವರ ವಾಹನ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಪುಟ್ಟ ಮಗಳನ್ನು ಕಳೆದುಕೊಂಡಿದ್ದಲ್ಲದೇ ಕಾರಿನಲ್ಲಿದ್ದ ಕುಟುಂಬದವರೆಲ್ಲ ಗಾಯಗೊಂಡಿದ್ದರು. ಅದರಲ್ಲೂ ಉದಯ್ ಚವ್ಹಾಣ್ ಅವರ ಬೆನ್ನುಮೂಳೆ ಮುರಿದಿದ್ದು, ಕೈ-ಕಾಲುಗಳು ಕೆಲಸ ಮಾಡದಂತಹ ಪರಿಸ್ಥಿತಿಗೆ ಬಂದು ಬಿಟ್ಟಿದೆ. ಪ್ರತಿಯೊಂದಕ್ಕೂ ಇತರರ ಮೇಲೆ ಅವಲಂಬಿತರಾಗುವ ಸ್ಥಿತಿಗೆ ತಲುಪಿ, ಕೇವಲ ಮಾತನಾಡಲು ಮಾತ್ರ ತಮ್ಮಿಂದ ಸಾಧ್ಯ ಎಂಬ ದುಃಸ್ಥಿತಿ ನಿರ್ಮಾಣವಾಗಿತ್ತು
ತಮ್ಮ ದೇಹದ ಎಲ್ಲ ಅಂಗಗಳು ಕಾರ್ಯ ಮಾಡುವುದನ್ನು ನಿಲ್ಲಿಸಿದಾಗ, ಮಾತಿನ ಶಕ್ತಿ ಮತ್ತು ಆಲೋಚನಾ ಶಕ್ತಿ ಮಾತ್ರ ಉದಯ್ ಚವ್ಹಾಣ್ ಅವರಲ್ಲಿ ಉಳಿದಿತ್ತು. ಈಗ ಅವರಲ್ಲಿರುವ ಜ್ಞಾನವೇ ಕುಟುಂಬದ ನಿರ್ವಹಣೆ ಹಾಗೂ ಕಷ್ಟದ ಪರಿಸ್ಥಿತಿಯಿಂದ ಹೊರ ಬರುವ ದಾರಿ ಕಂಡುಕೊಳ್ಳಲು ಸಹಾಯ ಮಾಡಿದೆ.ವೃತ್ತಿಯಲ್ಲಿ ವಕೀಲರಾದರೂ ಉದಯ್ ಚವ್ಹಾಣ್, ತಮ್ಮ ಜ್ಞಾನದ ಮೂಲಕ ಮಕ್ಕಳಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಈ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಸದ್ಯ ಸುಮಾರು 20 ವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಪಾಠ ಕಲಿಯುತ್ತಿದ್ದಾರೆ.
ಉದಯ್ ಚವ್ಹಾಣ್ ಸ್ವಾವಲಂಬಿ ಜೀವನದ ಪ್ರಯತ್ನಕ್ಕೆ ಪತ್ನಿ ನಮ್ರತಾ ಕೂಡ ಸಾಥ್ ನೀಡುತ್ತಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ