ಹೊಸ ದಿಗಂತ ವರದಿ, ಕಾಸರಗೋಡು:
ಕೇರಳದ 49 ಸಹಕಾರಿ ಬ್ಯಾಂಕ್ ಗಳಲ್ಲಿ ಹಗರಣಗಳು ನಡೆದಿವೆ ಎಂದು ಸಹಕಾರ ಖಾತೆ ಸಚಿವ ವಿ.ಎನ್.ವಾಸವನ್ ನೀಡಿದ ಹೇಳಿಕೆಯು ಬಿಜೆಪಿಯ ಆರೋಪಗಳನ್ನು ದೃಢಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಸಿಪಿಎಂ ನಿಯಂತ್ರಣದಲ್ಲಿರುವ ಬಹುತೇಕ ಕಡೆಗಳ ಸಹಕಾರಿ ಬ್ಯಾಂಕ್ ಗಳಲ್ಲಿ ದೊಡ್ಡ ಹಗರಣಗಳಾಗಿವೆ. ಅಲ್ಲದೆ ಸಿಪಿಎಂ ಪಕ್ಷವು ಸಹಕಾರಿ ಬ್ಯಾಂಕ್ ಗಳನ್ನು ಭಾರೀ ಪ್ರಮಾಣದ ಕಪ್ಪು ಹಣದ ವಹಿವಾಟಿನ ಕೇಂದ್ರಗಳಾಗಿ ಪರಿವರ್ತಿಸುತ್ತಿದೆ ಎಂದು ಕೆ.ಸುರೇಂದ್ರನ್ ಗಂಭೀರ ಆರೋಪ ಮಾಡಿದರು.
ಪೇರವೂರು ಬ್ಯಾಂಕ್ ನಲ್ಲಿ ಮಾತ್ರವಲ್ಲದೆ ಕಣ್ಣೂರು ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳ ಸುಮಾರು 150 ಬ್ಯಾಂಕ್ ಗಳಲ್ಲಿ ಹೂಡಿಕೆದಾರರಿಗೆ ವಂಚಿಸಲಾಗಿದೆ. ಈ ಹಿಂದೆಯೇ ಬಿಜೆಪಿ ಇದನ್ನು ಬಹಿರಂಗಪಡಿಸಿತ್ತು. ಆದರೆ ಕೇಂದ್ರ ಸರಕಾರವು ಸಹಕಾರಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ ಮತ್ತು ರಾಜ್ಯದ ಎಲ್ಲ ಸಹಕಾರಿ ಬ್ಯಾಂಕ್ ಗಳು ಪಾರದರ್ಶಕವಾಗಿವೆ ಎಂದು ಕೇರಳದ ಎಡರಂಗ ಸರಕಾರವು ಉತ್ತರಿಸಿತ್ತು ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ನೆನಪಿಸಿದರು.
ಆಗಿನ ಸಹಕಾರ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರು 2019 ರಲ್ಲಿ ಕರಿವನೂರು ಬ್ಯಾಂಕ್ ಹಗರಣದ ಬಗ್ಗೆ ದೂರು ಸ್ವೀಕರಿಸಿದ್ದರು ಎಂದು ಈಗಿನ ಸಹಕಾರ ಖಾತೆ ಸಚಿವ ವಿ.ಎನ್.ವಾಸವನ್ ಅವರು ವಿಧಾನಸಭೆಗೆ ಲಿಖಿತವಾಗಿ ತಿಳಿಸಿರುವುದು ಆಘಾತಕಾರಿಯಾಗಿದೆ. ಸಿಪಿಎಂ ನಾಯಕರು ಹಗರಣದಲ್ಲಿ ಆರೋಪಿಗಳಾದ ಕಾರಣ ಅಂದಿನ ಸಚಿವರು ದೂರನ್ನು ಮುಚ್ಚಿಟ್ಟಿದ್ದರು. 69 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದು , ಅವರಲ್ಲಿ ಎಷ್ಟು ಮಂದಿ ಸಿಪಿಎಂ ನಾಯಕರು ಎಂಬುದನ್ನು ವಿ.ಎನ್.ವಾಸವನ್ ಸ್ಪಷ್ಟಪಡಿಸಬೇಕು ಎಂದು ಕೆ.ಸುರೇಂದ್ರನ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.