ದೇಶದ ಕಾನೂನು-ಸಂವಿಧಾನಕ್ಕೆ ಗೌರವ ನೀಡಿ ಸುಮ್ಮನಿದ್ದೇವೆ, ನಮ್ಮನ್ನು ಕೆಣಕದಿರಿ: ಕೃಷ್ಣಮೂರ್ತಿ

ಹೊಸದಿಗಂತ ವರದಿ, ಕೊಡಗು:

ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ಹಾಗೂ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಭಜರಂಗದಳ, ದುರ್ಗಾವಾಹಿನಿ ಹಾಗೂ ಮಾತೃಶಕ್ತಿ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಹರ್ಷ ಹತ್ಯೆಯನ್ನು‌ ಖಂಡಿಸಿ, ಆರೋಪಿಗಳ ವಿರುದ್ಧ ಘೊಷಣೆ ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮೃತ ಹರ್ಷ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಪ್ರತಿಭಟನಾಕಾರರನ್ನುದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ, ನ್ಯಾಯವಾದಿ ಪಿ.ಕೃಷ್ಣಮೂರ್ತಿ ಅವರು, ಮತಾಂಧ ಜಿಹಾದಿಗಳು ದೇಶಪ್ರೇಮಿ, ಭಜರಂಗದಳ ಕಾರ್ಯಕರ್ತ ಹರ್ಷನನ್ನು ಹೇಡಿಗಳಂತೆ ರಾತ್ರೋರಾತ್ರಿ ಹತ್ಯೆ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಇಂತಹ ಮತಾಂಧರಿಗೆ ಕುಮ್ಮಕ್ಕು ನೀಡಿ, ಹಿಂದೂ ಸಮಾಜದ ಹಲವು ‌ಕಾರ್ಯಕರ್ತರ ಕಗ್ಗೊಲೆ ನಡೆದಿದೆ. ಹಿಂದೂ ಸಮಾಜ ಬಿಜೆಪಿ ಮೇಲೆ ನಂಬಿಕೆ ಇಟ್ಟು ಅವರಿಗೆ ಅಧಿಕಾರ ಕೊಟ್ಟಿದೆ. ಹೀಗಿದ್ದೂ ಇಂತಹ ಕೃತ್ಯ ನಡೆದಿರುವುದು ಖಂಡನೀಯ. ಹಿಂದೂ ಸಮಾಜದ ಕಾರ್ಯಕರ್ತರ ಸಾವಿಗೆ ಸರಕಾರ ತಕ್ಕ ಉತ್ತರ ಕೊಡಬೇಕಾಗಿದೆ. ಹಿಂದೂಗಳಿಗೆ ರಕ್ಷಣೆ ನೀಡಬೇಕಾಗಿದೆ. ಅದು ಆಗದಿದ್ದಲ್ಲಿ ಸರಕಾರಕ್ಕೆ ಮುಂಬರುವ ‌ದಿನಗಳಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ತಲವಾರು ಬೀಸಲು ನಮಗೂ ಗೊತ್ತಿದೆ: ಮತಾಂಧ ಜಿಹಾದಿಗಳು ನಮ್ಮ ಕಾರ್ಯಕರ್ತನನ್ನು ಷಡ್ಯಂತ್ರದಿಂದ ಕೊಲೆಗೈದಿದ್ದು, ಇಷ್ಟಾದರೂ ಹಿಂದೂಗಳು ತಾಳ್ಮೆಯಿಂದ ಇದ್ದಾರೆಂದರೆ ಅವರು ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ನೀಡುತ್ತಿರುವುದಕ್ಕೆ ಮಾತ್ರ. ತಲವಾರು ಬೀಸಲು ಮತಾಂಧರಿಗಿಂತ ಚೆನ್ನಾಗಿ ನಮಗೂ ಗೊತ್ತಿದೆ. ನಮ್ಮದು ಹಿಂದೂ ರಾಷ್ಟ್ರ, ಇಲ್ಲಿ ಹಿಂದುಗಳನ್ನು ಕೆಣಕ ಬೇಡಿ, ನಮ್ಮ ತಾಳ್ಮೆಯ ಕಟ್ಟೆ ಒಡೆಯಲು ತುಂಬಾ ಸಮಯಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶಕ್ಕಾಗಿ ಜೀವ ತೆತ್ತಿರುವ ಹರ್ಷ ಅವರ ಕುಟುಂಬಕ್ಕೆ ಕೂಡಲೇ ಸರಕಾರ 50 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರು ಈ ಸಂದರ್ಭ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಕುಮಾರ್, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತಯಂಡ ರವಿ ಕುಶಾಲಪ್ಪ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ನಗರ ಸಭಾ ಮಾಜಿ ಸದಸ್ಯ ಉಣ್ಣಿಕೃಷ್ಣ ಹಾಗೂ ಹಿಂದೂ ಪರ ಸಂಘಟನೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ನ್ಯಾಯ ಒದಗಿಸುವಂತೆ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!