ಹೊಸದಿಗಂತ ವರದಿ, ನಾಗಮಂಗಲ :
ಪೊಲೀಸ್ ಠಾಣೆ ಪಕ್ಕದಲ್ಲೇ ರೌಡಿಯೊಬ್ಬ ಹಫ್ತಾ ಕೊಡಲಿಲ್ಲ ಎಂಬ ಕಾರಣಕ್ಕೆ ಹಾರ್ಡ್ವೇರ್ ಮಾಲೀಕನೊಬ್ಬನಿಗೆ ಮಾರಮಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪೊಲೀಸ್ ಠಾಣೆ ಪಕ್ಕದಲ್ಲಿದ್ದ ಹಾರ್ಡ್ವೇರ್ ಅಂಗಡಿ ಮಾಲೀಕ ಇಬ್ರಾಹಿಂ ಎಂಬಾತನೇ ಹಲ್ಲೆಗೊಳದವರಾಗಿದ್ದು, ಈತನ ಮೇಲೆ ಠಾಣೆ ಮುಂಭಾಗದಲ್ಲೇ ವಾಸವಾಗಿರುವ ರೌಡಿಶೀಟರ್ ಗಿರಿ ಎಂಬಾತ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಲಕ್ಷಾಂತರ ರೂ. ದೋಚಿ ಪರಾರಿಯಾಗಿದ್ದಾನೆ.
ಮಂಡ್ಯ ಜಿಲ್ಲಾ ಸಶಸ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರಿ ದರೋಡೆ, ಸುಲಿಗೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಇಲಾಖೆಯಿಂದ ವಜಾ ಆಗಿದ್ದ. ನಂತರ ಈತನ ಉಪಟಳ ಹೆಚ್ಚಾಗಿದ್ದು, ಹಫ್ತಾ ವಸೂಲಿಯಲ್ಲಿ ತೊಡಗಿದ್ದ ಎಂದು ಹೇಳಲಾಗಿದ್ದು, ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹಾರ್ಡ್ವೇರ್ ಅಂಗಡಿ ಮಾಲೀಕನ ಬಳಿ ತೆರಳಿದ ಗಿರಿ ಹಣ ಕೊಡುವಂತೆ ಧಮಕಿ ಹಾಕಿದ್ದಾನೆ. ಆತ ನಿರಾಕರಿಸಿದ ಕಾರಣ ಇಬ್ರಾಹಿಂ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಆತನ ಬಳಿ ಇದ್ದ 1.20 ಲಕ್ಷ ರೂ. ನಗದು ಕಸಿದು ಪರಾರಿಯಾಗಿದ್ದಾನೆ.
ಹಲ್ಲೆಯಿಂದ ಗಾಯಗೊಂಡ ಇಬ್ರಾಹಿಂನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬಿಂಡಿಗನವಿಲೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.