ಹೊಸದಿಗಂತ ವರದಿ, ಬನವಾಸಿ:
ವರದಾ ನದಿಯಲ್ಲಿ ಕಾಲು ಜಾರಿ ಬಿದ್ದು ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ ಶನಿವಾರ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಸೀತಾರಾಮ ಮಧುಕೇಶ್ವರ ಮಡಿವಾಳ (18) ಎಂಬ ಬನವಾಸಿ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿ ಮೃತ ದುರ್ದೈವಿ. ಈತನು ಪ್ರತಿದಿನದಂತೆ ಮನೆಯವರಿಗೆ ತಿಳಿಸಿ ಶನಿವಾರ ಮುಂಜಾನೆ ಬೈಕ್ ನಲ್ಲಿ ಕಾಲೇಜಿಗೆ ತೆರಳಿದ್ದಾನೆ. ನಂತರದಲ್ಲಿ ಭಾಶಿ-ಮೊಗವಳ್ಳಿ ಹತ್ತಿರ ವರದಾ ನದಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಾಲು ಜಾರಿ ನೀರಿಗೆ ಬಿದ್ದಿದ್ದಾನೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಬನವಾಸಿ ಪೋಲಿಸ್ ಠಾಣೆಯ ಪಿಎಸ್ಐ ಹನುಮಂತ ಬಿರಾದಾರ ಭೇಟಿ ನೀಡಿ ಸ್ಥಳೀಯ ಸಂತೋಷ ತಿಮ್ಮಪ್ಪ ನಾಯ್ಕ್ ಎಂಬುವವರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.