ಹೊಸದಿಗಂತ ವರದಿ, ಅಂಕೋಲಾ
ಒಣ ಹುಲ್ಲು ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಪಿಕಪ್ ವಾಹನ ಸಂಪೂರ್ಣ ಸುಟ್ಟು ಹೋದ ಘಟನೆ ತಾಲೂಕಿನ ತಳಗದ್ದೆ ರೈಲ್ವೆ ಬ್ರಿಡ್ಜ್ ಬಳಿ ಸಂಭವಿಸಿದೆ.
ಶೇಖರ ಸುಕ್ರು ಗೌಡ ಎನ್ನುವವರು ಬೋಲೆರೊ ಪಿಕಪ್ ವಾಹನದಲ್ಲಿ ತಳಗದ್ದೆಯಿಂದ ಕುಮಟಾ ಕಡೆ ಸುಮಾರು 2 ಸಾವಿರ ಹುಲ್ಲಿನ ಕಟ್ಟುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಯಾವುದೋ ಕಾರಣದಿಂದ ಹುಲ್ಲಿಗೆ ಬೆಂಕಿ ತಗುಲಿದ್ದು ಇದು ತಕ್ಷಣ ಚಾಲಕನ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದ್ದು ಗಾಳಿಯಲ್ಲಿ ಒಮ್ಮೆಲೇ ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಲ್ಲದೇ ಸ್ಥಳೀಯರು ಪ್ರತ್ಯೇಕ ನೀರಿನ ಟ್ಯಾಂಕರ್ ಬೆಂಕಿ ಆರಿಸಲು ಪ್ರಯತ್ನ ಪಟ್ಟರೂ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನ ಬಹುತೇಕ ಸುಟ್ಟು ಹೋಗಿದೆ.
ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಒಣಹುಲ್ಲು, ರಕ್ಷಣಾ ಹೊದಿಕೆ ಸುಟ್ಟು ಕರಕಲಾಗಿದೆ.
ಬೆಂಕಿ ಆಕಸ್ಮಿಕಕ್ಕೆ ಖಚಿತ ಕಾರಣ ತಿಳಿದು ಬಂದಿಲ್ಲವಾದರೂ ದಾರಿ ಮಧ್ಯೆ ವಿದ್ಯುತ್ ತಂತಿ ತಗುಲಿ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ