ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಾಯುವ್ಯ ಮತ್ತು ಮಧ್ಯ ಭಾಗದಲ್ಲಿ ಶಾಖದಲೆಗಳ ಪರಿಣಾಮ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕಳವಳ ವ್ಯಕ್ತಪಡಿಸಿದೆ.
ಸೋಮವಾರದಂದು ಬಿಸಲಿನ ಝಳ ಹೆಚ್ಚಾಗುವ ಸಾಧ್ಯತೆಯಿದ್ದು ತಾಪಮಾನವು 46-47 ಡಿಗ್ರಿ ಸೆಲ್ಸಿಯಸ್ಗೆ ಏರಬಹುದು ಎಂದು ಭವಿಷ್ಯ ನುಡಿಯಲಾಗಿದ್ದು ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಬಿಸಿಗಾಲಿಯು ಇನ್ನೂ ಉಲ್ಬಣಗೊಳ್ಳುವ ಸಾಧ್ಯತೆಯಿದೆ.
ಜಮ್ಮುವಿನಲ್ಲಿ ಅತ್ಯಂತ ಬಿಸಿಯಾದ ದಿನವು 43.5 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ್ದರೆ ಧೋಲ್ಪುರದಲ್ಲಿ 48.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಸ್ಥಾನದ ಹಲವಾರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಹರಿಯಾಣಾ ರಾಜ್ಯದಲ್ಲಿ ಗುರುಗ್ರಾಮ್ ನಲ್ಲಿ ಅತ್ಯಂತ ಹೆಚ್ಚಿನ ತಾಪಮಾನವು ದಾಖಲಾಗಿದ್ದು ಗರಿಷ್ಟ 46.8 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಅಂಬಾಲಾ 44,, ಹಿಸಾರ್ 46, ಕರ್ನಾಲ್ 43.2, ರೋಹ್ಟಕ್ 46.5, ನರ್ನಾಲ್ 45.5, ಭಿವಾನಿ ಮತ್ತು ಸಿರ್ಸಾದಲ್ಲಿಗರಿಷ್ಠ 46.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಅಮೃತಸರದಲ್ಲಿ 45.6, ಲೂಧಿಯಾನ 45, ಪಟಿಯಾಲ 44, ಪಠಾಣ್ಕೋಟ್ ಮತ್ತು ಗುರುದಾಸ್ಪುರದಲ್ಲಿ ಗರಿಷ್ಠ 43.5 ಡಿಗ್ರಿಗಳು ದಾಖಲಾಗಿದ್ದರೆ ಬಟಿಂಡಾದಲ್ಲಿ ಕೂಡ ಗರಿಷ್ಟ ಪ್ರಮಾಣದ ತಾಪಮಾನ ದಾಖಲಾಗಿದೆ.
ಮೇ 16 ರಿಂದ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.