ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದ್ರಾಬಾದ್ ಸಂಸದ ಅಸಾಸುದ್ದೀನ್ ಓವೈಸಿ ಮತ್ತೆ ತಮ್ಮ ನಾಲಿಗೆ ಹರಿಯಬಿಟ್ಟಿದ್ದು ತಾಜ್ಮಹಲ್ ವಿವಾದದ ಕುರಿತು ಮಾತಾನಡುತ್ತಾ “ಅವರು (ಬಿಜೆಪಿಯವರು) ತಾಜ್ ಮಹಲ್ ಕೆಳಗೆ ಮೋದಿ ಪದವಿಯನ್ನು ಹುಡುಕುತ್ತಿದ್ದಾರೆ” ಎಂದಿದ್ದಾರೆ.
ಆಗ್ರಾದ ತಾಜ್ ಮಹಲ್ ನಲ್ಲಿರುವ 22 ಕೋಣೆಗಳ ಬೀಗ ತೆಗೆದು ಸತ್ಯಾನ್ವೇಷಣೆಯಾಗಬೇಕು. ಅದು ಘೋರಿಯಲ್ಲ ಬದಲಾಗಿ ಪುರಾತನ ಶಿವ ದೇವಾಲಯ ಎಂದು ಬಿಜೆಪಿ ನಾಯಕರೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಭಿವಂಡಿಯಲ್ಲಿ ಭಾಷಣ ಮಾಡುವಾಗ ಇದನ್ನು ಉಲ್ಲೇಖಿಸಿದ ಓವೈಸಿ “ತಾಜ್ ಮಹಲ್ ವಿಷಯವನ್ನು ಇತಿಹಾಸಕಾರರಿಗೆ ಬಿಡಬೇಕು. ಹಾಗಾಗಿಯೇ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ” ಎಂದಿದ್ದಾರೆ.
“ಮೊಘಲರು ಭಾರತದ ಹೊರಗಿನಿಂದ ಹೇಗೆ ಬಂದರು ಎಂಬುದರ ಕುರಿತು ಬಿಜೆಪಿ ಮಾತನಾಡುತ್ತಲೇ ಇರುತ್ತದೆ. ಪ್ರಪಂಚದ ವಿವಿಧ ಭಾಗಗಳಲ್ಲೂ ಹಲವಾರು ಇತರ ಸಮುದಾಯಗಳು ಹಾಗೆ ಮಾಡಿವೆ. ದ್ರಾವಿಡರು ಮತ್ತು ಆದಿವಾಸಿಗಳು ಮಾತ್ರ ಭಾರತದ ಮೂಲ ಜನಾಂಗ. ಭಾರತ ಕೇವಲ ಠಾಕ್ರೆಯವರದ್ದಲ್ಲ, ಮೋದಿ-ಶಾ ಅವರದ್ದೂ ಅಲ್ಲ. ಅದು ದ್ರಾವಿಡರು ಮತ್ತು ಆದಿವಾಸಿಗಳಿಗೆ ಸೇರಿದ್ದು. ಬಿಜೆಪಿ-ಆರೆಸ್ಸೆಸ್ ಮೊಘಲರ ನಂತರದಲ್ಲಿ ಬಂದಿದ್ದು. ವಾಸ್ತವದಲ್ಲಿ ಪೂರ್ವ ಏಷ್ಯಾ, ಆಫ್ರಿಕಾ, ಇರಾನ್, ಮಧ್ಯ ಏಷ್ಯಾದಿಂದ ಜನರು ವಲಸೆ ಬಂದ ನಂತರ ಭಾರತ ರೂಪುಗೊಂಡಿತು” ಎಂದು ಆರೋಪಿಸಿದ್ದಾರೆ.