ಹೊಸ ದಿಗಂತ ಡಿಜಿಟಲ್ ಡೆಸ್ಕ್
ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯುಟಿಒ) ಅನುಮತಿ ನೀಡಿದರೆ ಜಗತ್ತಿಗೆ ಭಾರತ ಆಹಾರ ದಾಸ್ತಾನು ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿಳಿಸಿದ್ದಾರೆ.
ಇಂದು ಗುಜರಾತ್ನ ಅದಲಾಜ್ನಲ್ಲಿ ಶ್ರೀ ಅನ್ನಪೂರ್ಣ ಧಾಮ್ ಟ್ರಸ್ಟ್ನ ಹಾಸ್ಟೆಲ್ ಮತ್ತು ಶಿಕ್ಷಣ ಸಂಕೀರ್ಣವನ್ನು ವೀಡಿಯೊ ಕಾನರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಮೋದಿ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಆಹಾರ ದಾಸ್ತಾನು ಕ್ಷೀಣಿಸುತ್ತಿದೆ, ಜಗತ್ತು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜನ ಬಯಸಿದ್ದನ್ನು ಪಡೆಯಲಾಗುತ್ತಿಲ್ಲ ಎಂದರು.
ಎಲ್ಲಾ ಬಾಗಿಲುಗಳು ಮುಚ್ಚಿರುವುದರಿಂದ ಪೆಟ್ರೋಲ್, ಡಿಸೇಲ್ ಸೇರಿದಂತೆ ತೈಲ ಹಾಗೂ ರಸಗೊಬ್ಬರಗಳನ್ನು ಖರೀದಿಸುವುದು ಕಷ್ಟಕರವಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಪ್ರತಿಯೊಬ್ಬರೂ ತಮ್ಮ ಷೇರುಗಳನ್ನು ಭದ್ರಪಡಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಕೋವಿಡ್ ವೇಳೆ ಭಾರತ ತನ್ನ ಸುಮಾರು 80 ಕೋಟಿ ಜನರಿಗೆ ಎರಡು ವರ್ಷಗಳಿಂದ ಉಚಿತ ಪಡಿತರವನ್ನು ನೀಡುತ್ತಿದೆ ಎಂದು ತಿಳಿದು ಜಗತ್ತು ಆಶ್ಚರ್ಯಚಕಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಜಗತ್ತು ಈಗ ಹೊಸ ಸಮಸ್ಯೆಯನ್ನು ಎದುರಿಸುತ್ತಿದೆ. ಪ್ರಪಂಚದ ಆಹಾರ ಸಂಗ್ರಹ ಖಾಲಿಯಾಗುತ್ತಿದೆ, ಅಮೆರಿಕಾ ಅಧ್ಯಕ್ಷರೊಂದಿಗೆ ಮಾತನಾಡುವ ವೇಳೆ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಡಬ್ಲ್ಯುಟಿಒ ಅನುಮತಿ ನೀಡಿದರೆ, ನಾಳೆಯಿಂದಲೇ ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಾಗಿದೆ ಎಂದು ನಾನು ಸಲಹೆ ನೀಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.