ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ನ ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆ ಗೆ (G7 Summit) ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಜತೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಉಕ್ರೇನ್ ಪರಿಸ್ಥಿತಿ ಆಲಿಸುವ ಜತೆಗೆ ಮುಂದಿನ ದಿನಗಳಲ್ಲಿ ಉಕ್ರೇನ್ಗೆ ಸಕಲ ರೀತಿಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಹಿರೋಶಿಮಾದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ಜತೆ ಮಾತುಕತೆ ನಡೆಸಿದೆ. ಉಕ್ರೇನ್ನಲ್ಲಿ ಶಾಂತಿಸ್ಥಾಪನೆ ಕುರಿತು ರಾಜತಾಂತ್ರಿಕ ಹಾಗೂ ಮಾತುಕತೆಯ ಮಾರ್ಗದಲ್ಲಿ ಭಾರತ ಎಂದಿಗೂ ಬೆಂಬಲ ನೀಡುತ್ತದೆ. ಹಾಗೆಯೇ, ಮಾನವೀಯ ನೆಲೆಯಲ್ಲೂ ಸಕಲ ರೀತಿಯಲ್ಲಿ ಸಹಕಾರ ನೀಡುತ್ತದೆ ಎಂಬ ಭರವಸೆ ನೀಡಿದೆ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ಉಕ್ರೇನ್ ಬಿಕ್ಕಟ್ಟನ್ನು ಜಿ-7 ರಾಷ್ಟ್ರಗಳ ಗಮನಕ್ಕೆ ತರುವ, ಅದರ ಗಂಭೀರತೆಯನ್ನು ಮನವರಿಕೆ ಮಾಡುವ ದಿಸೆಯಲ್ಲೂ ಮೋದಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ‘ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧವು ಜಗತ್ತಿಗೇ ದೊಡ್ಡ ವಿಷಯವಾಗಿದೆ. ಇದೊಂದು ಕೇವಲ ರಾಜಕೀಯ, ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಎಂದು ಎನಿಸುವುದಿಲ್ಲ. ಇದು ಮಾನವೀಯತೆಯ ಬಿಕ್ಕಟ್ಟಾಗಿದೆ. ಭಾರತವು ಯುದ್ಧದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲ ರೀತಿಯ ಬೆಂಬಲ ನೀಡುತ್ತದೆ’ ಎಂದು ತಿಳಿಸಿದ್ದಾರೆ.