ಹೊಸದಿಗಂತ ವರದಿ ಬೆಂಗಳೂರು:
ಶಂಕಿತ ಉಗ್ರರನ್ನು ಬಂಧಿಸಿದ ಕ್ರಮವನ್ನು ಸ್ವಾಗತಿಸಿದ ಅವರು ಸಂಬಂಧಿಸಿದ ಇಲಾಖೆಯನ್ನು ಅಭಿನಂದಿಸಿದರು. ಇನ್ನೊಬ್ಬ ಶಂಕಿತ ಉಗ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈ ಜಾಲದ ಕುರಿತು ತನಿಖೆಯನ್ನು ಎನ್ಐಎಗೆ ವಹಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಆಗ್ರಹಿಸಿದರು.
ಎನ್ಐಎಗೆ ವಹಿಸುವುದು ಸೂಕ್ತ: ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವ್ಯಾಪ್ತಿಯನ್ನು ಮೀರಿ ವಿದೇಶಕ್ಕೂ ಈ ಜಾಲ ಹರಡಿದೆ ಎಂಬ ಸಂಶಯವಿದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವುದು ಸೂಕ್ತ ಎಂದು ನುಡಿದರು.ಬೆಂಗಳೂರಿನ ಹಲವೆಡೆ ಬಾಂಬ್ ಸ್ಫೋಟಿಸಲು ಯೋಜಿಸಿದ್ದರು ಎಂಬುದು ಬಹಳ ಗಂಭೀರವಾದ ಸಂಗತಿ ಎಂದ ಅವರು, ಕಾಂಗ್ರೆಸ್ ನಾಯಕರು ಈಗಲಾದರೂ ಮನ ಪರಿವರ್ತನೆ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು.
ವಿವೇಚನೆ ಇಲ್ಲ: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆದಾಗ ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯನ್ನು ನಿಂದಿಸಿದ್ದರು. ಬಿಜೆಪಿ ದುರುದ್ದೇಶದಿಂದ ಬಂಧಿಸಿದೆ ಎಂದು ಟೀಕಿಸಿದ್ದರು ಎಂದು ವಿವರಿಸಿದರು. ಉಗ್ರಗಾಮಿ ಜಾಲ ಕರ್ನಾಟಕದಲ್ಲಿ ವಿಸ್ತರಿಸುತ್ತಿರುವುದು ನಿರ್ವಿವಾದ ಸಂಗತಿ. ವಿವೇಚನೆ ಇಲ್ಲದೆ ಮತಬ್ಯಾಂಕಿಗಾಗಿ ಅವರೆಲ್ಲ ನಮ್ಮ ಸೋದರರು ಎಂದು ಅಪ್ಪಿಕೊಳ್ಳಲು ಹೋಗಬೇಡಿ ಎಂದು ಕಿವಿಮಾತು ಹೇಳಿದರು.
ನಮ್ದೂ ಕೆ ಸರಕಾರ್: ಪೊಲೀಸರು ಸಮಗ್ರ ತನಿಖೆಗೆ ಸಹಕರಿಸಲಿ. ಕಾಂಗ್ರೆಸ್ ಪಕ್ಷದವರು ಬ್ರದರ್ಸ್ ಎಂದು ಅವರನ್ನು ಬಿಡಿಸಲು ಹೋಗದಿರಲಿ ಎಂದು ಸಲಹೆ ನೀಡಿದರು. ಈ ಜಾಲ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಸಾಧ್ಯತೆ ಇದ್ದು, ಇದನ್ನು ಎನ್ಐಎ ತನಿಖೆಗೆ ಒಪ್ಪಿಸಿ ಎಂದು ಒತ್ತಾಯಿಸಿದರು. ಟೆರರಿಸ್ಟ್ಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ ‘ನಮ್ದೂ ಕೆ ಸರಕಾರ್’ ಎಂಬ ಭಾವನೆ ಬರುತ್ತದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ವಿಪಕ್ಷಗಳ ಕೂಟ ಅದೇ ಬಾಟಲಿ ಅದೆ ವೈನು ಆದರೆ ಹೊಸ ಲೇಬಲ್ ನಂತಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.