ಹೊಸದಿಗಂತ ವರದಿ ಶಿವಮೊಗ್ಗ:
ಅಜ್ಜಿ ಇಂದಿರಾಗಾಂಧಿ ಜನಸಂಘವನ್ನು ಮುಗಿಸಲು ಎಲ್ಲಾ ಪ್ರಯತ್ನ ಮಾಡಿದ್ದರು. ಆಗಲೇ ಆಗಲಿಲ್ಲ, ಇನ್ನು ಮೊಮ್ಮಗ(ರಾಹುಲ್ ಗಾಂಧಿ) ಕಾಲದಲ್ಲಿ ಆಗುತ್ತಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದ್ದಾರೆ.
ಹಿಂದುಳಿದ ಸಮಾಜಗಳ ವಿವಿಧ ಮಠಾಧೀಶರು ಮನೆಗೆ ಭೇಟಿ ನೀಡಿ ಆಶೀರ್ವದಿಸಿದ ಬಳಿಕ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ತುರ್ತು ಪರಿಸ್ಥಿತಿ ಹೇರಿ ಜನ ಸಂಘವನ್ನು ನಿರ್ನಾಮ ಮಾಡಲು ಯತ್ನಿಸಿದರು. ಆಯಿತಾ? ಈಗ ಅವರ ಮೊಮ್ಮಗ ರಾಹುಲ್ ಗಾಂಧಿ ಕೈಯಲ್ಲಿ ಸಾಧ್ಯವಾ ಎಂದು ಪ್ರಶ್ನಿಸಿದರು.
ಗುತ್ತಿಗೆದಾರ ಸಂತೋಷ್ ಅವರದ್ದು ಆತ್ಮಹತ್ಯೆಯೋ, ಕೊಲೆಯೋ ಎಂದು ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸಂತೋಷ್ ಅವರನ್ನು ಯಾರೋ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಏನೇ ಆಗಿದ್ದರೂ ನ್ಯಾಯ ಹೊರಬರಬೇಕು. ಇದರ ಹಿಂದೆ ಡಿ.ಕೆ.ಶಿವಕುಮಾರ್ ಇದ್ದಾರೆ ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ. ಅದು ತನಿಖೆಯಿಂದ ಹೊರಬಂದ ಬಳಿಕ ಮಾತನಾಡುತ್ತೇನೆ ಎಂದರು.