ಹೊಸದಿಗಂತ ಡಿಜಿಟಲ್ ಡೆಸ್ಕ್
ದ.ಕ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿರುವ ಜಲೀಲ್ ಕೊಲೆ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಹೊರಟಿರುವುದು ದುರದೃಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಭಾನುವಾರ ಉಡುಪಿಯಲ್ಲಿ ಬೂತ್ ಸಂಗಮ ಕಾರ್ಯಕ್ರಮ ಉದ್ಘಾಟಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದರು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ನಮ್ಮ ಸರಕಾರ ಕೈಗೊಳ್ಳುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ನಾವು ಅವರ ಜೊತೆ ಮಾತುಕತೆ ಮಾಡುತ್ತೇವೆ, ಶ್ರೀರಾಮುಲು ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಶ್ರೀರಾಮುಲು, ಜನಾರ್ದನ ರೆಡ್ಡಿ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಹಲವಾರು ಯೋಚನೆ, ಯೋಜನೆಗಳು ಇವೆ. ಹತ್ತಾರು ಪಾರ್ಟಿ ಹಿಂದೆಯೂ ಬಂದಿದೆ ಮುಂದೆಯೂ ಬರುತ್ತದೆ. ಬಿಜೆಪಿಗೆ ಯಾವುದೇ ಲಾಸ್ ಇಲ್ಲ, ಬಿಜೆಪಿ ದೇಶದ ನಂಬರ್ 1 ಪಾರ್ಟಿ, ನಾವು ಕಾಂಗ್ರೆಸ್ ನಂತಹ ಪಾರ್ಟಿಯನ್ನೇ ಎದುರಿಸಿ ಬಂದವರು, ನಮ್ಮ ಎಲ್ಲಾ ಹಿರಿಯರು ಮಾತುಕತೆ ಮಾಡುತ್ತಾರೆ, ಏನಾಗುತ್ತೋ ನೋಡೋಣ ಎಂದರು.
ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ವಿಚಾರ
ತಿರುಕನೋರ್ವ ಊರ ಮುಂದೆ ಕನಸು ಕಾಣುತ್ತಿದ್ದನು. ನಾವು ಶಾಲೆಗೆ ಹೋಗುವಾಗ ಈ ಪದ್ಯ ಕೇಳಿದ್ದೇವೆ, ಆ ಹಾಡಿನಂತೆ ಸಿದ್ದರಾಮಯ್ಯ ಪರಿಸ್ಥಿತಿ ಆಗುತ್ತದೆ. ಸಿದ್ದರಾಮಯ್ಯ ಅವರ ಅಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.