ಹೊಸದಿಗಂತ ಡಿಜಿಟಲ್ ಡೆಸ್ಕ್:
2022 ಬಾಲಿವುಡ್ ಸಿನಿಮಾಗಳಿಗೆ ಒಂದೇ ರೀತಿಯಲ್ಲಿ ಬ್ಯಾಡ್ ಇಯರ್ ಎಂದು ಹೇಳಬಹುದು. ಕಳೆದ ವರ್ಷ ರಿಲೀಸ್ ಆದ ಹಿಂದಿ ಸಿನಿಮಾಗಳು ಹೆಚ್ಚು ಸಕ್ಸಸ್ ಕಂಡಿಲ್ಲ.
ಬೆರಳೆಣಿಕೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಲ್ಪ ಪ್ರಮಾಣದಲ್ಲಿ ಕಮಾಲ್ ಮಾಡಿತ್ತು.
ಹೀಗಾಗಿ 2023 ನಲ್ಲೂ ಮತ್ತೆ ಆ ರೀತಿ ಆಗುತ್ತಾ ಎಂಬ ಆತಂಕ ಬಾಲಿವುಡ್ ನಲ್ಲಿ ಕಾಡುತ್ತಿದೆ. ಈ ಕುರಿತು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಕೂಡ ಯುಪಿ ಸಿಎಂ ಯೋಗಿ ಅವರ ಜೊತೆ ಮಾತನಾಡಿ #BoycottBollywood ಪದ ತೆಗೆದುಹಾಕುವಂತೆ ಮನವಿ ಮಾಡಿದ್ದರು.
ಇದೀಗ ಸುನಿಲ್ ಶೆಟ್ಟಿ ಹೇಳಿಕೆಯನ್ನು ಶೇರ್ ಮಾಡಿರುವ ಸ್ಯಾಂಡಲ್ ವುಡ್ ನಟ ಕಿಶೋರ್ ಬಾಲಿವುಡ್ ಪರ ನಿಲ್ಲುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಮಾಡಿದ ಅವರು, ‘ಇಡೀ ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್ ನ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು, ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ನ ಪರವಾಗಿ ನಿಲ್ಲುವ ಕಾಲ ಬಂದಿದೆ’ ಎಂದು ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಒಂದು ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ. ಇಷ್ಟಾದರೂ ಚಿತ್ರರಂಗದವರು ಮಾತನಾಡದೇ ಕೂತಿರುವ ಹೆದರಿಕೆಯ ವಾತಾವರಣ ಸೃಷ್ಟಿಯಾಗಿರುವುದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಇದು ಸಮಾಜವನ್ನು ವಿಷಪೂರಿತಗೊಳಿಸುವ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಇದನ್ನು ತಡೆಯಬೇಕಿದೆ, ಶಿಕ್ಷಿಸಬೇಕಾಗಿದೆ. ದ್ವೇಷದ ಈ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ವ್ಯಾಪಿಸುವ ಮುನ್ನ’ ಎಂದು ಹೇಳಿದ್ದಾರೆ.