ಹೊಸದಿಗಂತ ವರದಿ ವಿಜಯಪುರ:
ನಡೆದಾಡುವ ದೇವರಾದ ಸಿದ್ದೇಶ್ವರ ಶ್ರೀಗಳ ಅಗಲಿಕೆ ಹಿನ್ನೆಲೆ ಇಲ್ಲಿನ ಜ್ಞಾನಯೋಗಾಶ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಶ್ರಮಕ್ಕೆ ಶನಿವಾರ ಭೇಟಿ ನೀಡಿ, ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಕಲಬುರಗಿಯಿಂದ ಹೆಲಿಕಾಪ್ಟರ್ ಮೂಲಕ ನಗರದ ಸೈನಿಕ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಿದ ನಡ್ಡಾ ಅವರು ವಾಹನದಲ್ಲಿ ರಸ್ತೆ ಮೂಲಕ ಜ್ಞಾನಯೋಗಾಶ್ರಮಕ್ಕೆ ತೆರಳಿದರು. ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯ ಹಿನ್ನೆಲೆ ಆಶ್ರಮದ ಅಧ್ಯಕ್ಷ ಶ್ರೀ ಹಾಗೂ ಕಿರಿಯ ಶ್ರೀಗಳಿಗೆ ಸಾಂತ್ವನ ಹೇಳಿ, ಸಿದ್ದೇಶ್ವರ ಶ್ರೀ ಗಳ ಭಾವಚಿತ್ರ ನಮನ ಸಲ್ಲಿಸಿದರು.
ಬಳಿಕ ಆಶ್ರಮದ ಪ್ರಣವ ಮಂಟಪಕ್ಕೆ ಜೆ.ಪಿ. ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಅಶ್ವತ್ಥ್ ನಾರಾಯಣ, ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮುಖಂಡ ಗೋಪಾಲ ಕಾರಜೋಳ, ವಿಜುಗೌಡ ಪಾಟೀಲ ಸೇರಿದಂತೆ ಇತರೆ ನಾಯಕರು ಪ್ರದಕ್ಷಿಣೆ ಹಾಕಿದರು.
ಬಳಿಕ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ನಗರದ ವಾರ್ಡ್ ನಂ. 10 ರಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ನಿಮಿತ್ತ ಮಿಸ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಹಾಗೂ ಗೋಡೆ ಬರಹ, ಕರಪತ್ರ ಹಂಚಿಕೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಇತರೆ ಮುಖಂಡರು ಇದ್ದರು.