ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪುನೀತ್ ರಾಜಕುಮಾರ್ ಅಭಿನಯದ ಕಟ್ಟಕಡೆಯ ಸಿನಿಮಾ ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅಸ್ವಸ್ಥಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಅಸ್ವಸ್ಥಗೊಂಡ ಅವರನ್ನು ನಿನ್ನೆ ಸಂಜೆ ಶೇಷಾದ್ರಿಪುರದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಆಸ್ಪತ್ರೆಯವರು ಅವರ ಆರೋಗ್ಯ ಸ್ಥಿತಿಯ ಕುರಿತು ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ನಿನ್ನೆ ಸಂಜೆ ಕಿಶೋರ್ ಪತ್ತಿಕೊಂಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರ ಮೆದುಳಿನ ಎಡಭಾಗದಲ್ಲಿ ರಕ್ತಸ್ರಾವವಾಗಿತ್ತು. ವೈದ್ಯರು ರಾತ್ರಿ ಸರ್ಜರಿ ಮಾಡಿ, ಇಂದು ಬೆಳಗಿನ ಜಾವ ಐಸಿಯುಗೆ ಸ್ಥಳಾಂತರಿಸಿದ್ದಾರೆ. ಸದ್ಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದು, ತೀವ್ರ ಗಮನ ಇಡಲಾಗಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ.