ಅಮರನಾಥ ಯಾತ್ರೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಎನ್‌ಕೌಂಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಮ್ಮು ಮತ್ತು ಕಾಶ್ಮೀರದಲ್ಲಿ  ಭದ್ರತಾ ಪಡೆಗಳು ತಡರಾತ್ರಿ ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಜೂನ್ 30 ರಿಂದ ಪ್ರಾರಂಭವಾಗುವ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ದಾಳಿ ನಡೆಸಲು ಉಗ್ರರು ಉದ್ದೇಶಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಭದ್ರತಾ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿಯೊಬ್ಬರು ಸಣ್ಣಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅಮರನಾಥ ಯಾತ್ರೆಯ ವಿರುದ್ಧ ಮೂವರು ಭಯೋತ್ಪಾದಕರು ಸಂಚು ರೂಪಿಸಿದ್ದರು. ಇಬ್ಬರು ಪಾಕಿಸ್ತಾನಿಗಳು ಮತ್ತು ಒಬ್ಬ ಸ್ಥಳೀಯ ಉಗ್ರಗಾಮಿ ಈ ಸಂಚಿನಲ್ಲಿ ಭಾಗಿಯಾಗಿದ್ದರು.
ಎನ್‌ಕೌಂಟರ್ ಸ್ಥಳದಿಂದ ವಶಪಡಿಸಿಕೊಂಡ ದಾಖಲೆಗಳ ಪ್ರಕಾರ, ಹತರಾದ ಉಗ್ರರಲ್ಲಿ ಒಬ್ಬಾತನನ್ನು ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ಅಬ್ದುಲ್ಲಾ ಗೌಜ್ರಿ ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ಇನ್ನೊಬ್ಬ ಉಗ್ರನನ್ನು ಅನಂತನಾಗ್ ಜಿಲ್ಲೆಯ ನಿವಾಸಿ ಆದಿಲ್ ಹುಸೇನ್ ಮಿರ್ ಅಲಿಯಾಸ್ ಸುಫಿಯಾನ್ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ. ಈ ಭಯೋತ್ಪಾದಕರ ಗುಂಪು ಸೋಪೋರ್ ನಲ್ಲಿ ನಡೆಸಿದ್ದ ಎನ್‌ಕೌಂಟರ್‌ನಲ್ಲಿ ತಪ್ಪಿಸಿಕೊಂಡಿದ್ದರು. ಅವರ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿ ಹೊಡೆದುರುಳಿಸಲಾಗಿದೆ ಎಂದು ಐಜಿಪಿ ಹೇಳಿದರು.
ಉಗ್ರರಿಂದ 2 ಎಕೆ-47 ರೈಫಲ್ಸ್‌, 10 ಮ್ಯಾಜಜೀನ್‌, ಸಜೀವ ಗುಂಡುಗಳು ಮತ್ತಿತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!