ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲೆಡೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಇದರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ವಿರುದ್ಧ ಸ್ಪರ್ಧೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಈ ಮೂಲಕ ಜೆಡಿಎಸ್ನಿಂದ ರಾಜ್ಯದಲ್ಲಿ 207 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಮತದಾನಕ್ಕೂ ಮುನ್ನವೇ 2ನೇ ವಿಕೆಟ್ ಬಿದ್ದು ಹೋಗಿದೆ.
ಒಂದೆಡೆ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದ್ದರೆ, ಇತ್ತ ಜೆಡಿಎಸ್ ಅಭ್ಯರ್ಥಿ ತಮ್ಮ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಜೆಡಿಎಸ್ನಿಂದ ಬಿ-ಫಾರಂ ಪಡೆದು ಸಲ್ಲಿಕೆ ಮಾಡಿದ್ದ ನಾಮಪತ್ರವನ್ನು ಇಂದು (ಸೋಮವಾರ) ವಾಪಾಸ್ ಪಡೆದು ನಾಪತ್ತೆಯಾಗಿದ್ದಾರೆ. ಜೊತೆಗೆ ಫೋನ್ ಸ್ವಿಚ್ಡ್ ಆಫ್ ಮಾಡಿ ನಾಪತ್ತೆ ಆಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಈ ಕ್ಷೇತ್ರದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಇದೀಗ ಜೆಡಿಎಸ್ ಅಭ್ಯರ್ಥಿ ನಾಪತ್ತೆಯು ಹಲವು ಅನುಮಾನ ವ್ಯಕ್ತವಾಗಿವೆ. ಕಾಂಗ್ರೆಸ್ನ ಅಭ್ಯರ್ಥಿ ಮಾಜಿ ಸಚಿವ ಯು.ಟಿ. ಖಾದರ್ ಅವರ ಒತ್ತಡಕ್ಕೆ ಮಣಿದು ಜೆಡಿಎಸ್ನ ಅಭ್ಯರ್ಥಿ ಅಲ್ತಾಫ್ ನಾಮ ಪತ್ರ ವಾಪಸ್ ಪಡೆದಿದ್ದಾರಾ ಎಂಬ ಚರ್ಚೆ ಇದೀಗ ಸಾರ್ವಜನಿಕರಲ್ಲಿ ಶುರುವಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಅಲ್ತಾಫ್ ಕುಂಪಲ ಉತ್ತರ ನೀಡಬೇಕಿದೆ.
ಮಂಗಳೂರು ಕ್ಷೇತ್ರದಲ್ಲಿ ಯು.ಟಿ. ಖಾದರ್ ವಿರುದ್ಧ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದ ಅಲ್ತಾಫ್ ಅವರು, ಕ್ಷೇತ್ರದಲ್ಲಿ ಭಾರಿ ದೊಡ್ಡಮಟ್ಟದ ಸಂಚಲನ ಮೂಡಿಸಿದ್ದರು. ಜೊತೆಗೆ ಎಸ್ಡಿಪಿಐನಿಂದ ರಿಯಾಜ್ ಸ್ಪರ್ಧೆ ಬೆನ್ನಲ್ಲೇ ಜೆಡಿ ಎಸ್ ನಿಂದ ಅಲ್ತಾಫ್ ಸ್ಪರ್ಧೆ ಮಾಡಿದ್ದರು. ಒಟ್ಟಾರೆ ಮಂಗಳೂರುದಲ್ಲಿ ಇಬ್ಬರು ಮುಸ್ಲಿಂ ನಾಯಕರ ಸ್ಪರ್ಧೆಯಿಂದ ಕಾಂಗ್ರೆಸ್ನ ಮತಗಳು ವಿಭಜನೆ ಆಗುವ ಭೀತಿ ಎದುರಾಗಿತ್ತು.