ಹೊಸದಿಗಂತ ವರದಿ,ಕಲಬುರಗಿ:
ಸಚಿವ ಸ್ಥಾನ ಕಳೆದುಕೊಳ್ಳುವ ಎಚ್ಚರಿಕೆ ಜೊತೆಗೆ ಸಾಕಷ್ಟು ಒತ್ತಡ ಹಾಕಿದರೂ ಮಣಿಯದೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಿರುವದು ಹರ್ಷದಾಯಕ ವಿಷಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಮತ್ತು ಮಾಜಿ ಸಚಿವ ಬಾಬುರಾವ ಚಿಂಚನಸೂರ ಕೋಲಿ ಹಾಗೂ ಪರ್ಯಾಯ ಪದವುಳ್ಳ ಸಮುದಾಯವನ್ನು ಎಸ್ಟಿ,ಗೆ ಸೇರಿಸುವ ಭರವಸೆ ನೀಡಿದ್ದೇವು. ಅದರಂತೆ ಸರ್ಕಾರದ ಗಮನಕ್ಕೆ ತಂದಾಗ ಜನರಿಗೆ ನಾವು ನೀಡಿದ ಭರವಸೆಯಂತೆ ಸರ್ಕಾರ ಕಾರ್ಯಕೈಗೊಂಡಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೇಲೆ ಇತರೆ ಸಮುದಾಯದಿಂದ ಒತ್ತಡವಿತ್ತು. ಕೊಲಿ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬಾರದು, ದಿಟ್ಟ ನಿರ್ಧಾರಕ್ಕೆ ಮುಂದಾದರೆ, ನಿಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳತ್ತೀರಾ ಎಂಬ ಎಚ್ಚರಿಕೆ ಕೂಡಾ ನೀಡಿದರು.
ಸಾಕಷ್ಟು ಒತ್ತಡ, ಎಚ್ಚರಿಕೆ ಇದ್ದರೂ ಯಾವುದಕ್ಕೂ ಕಿವಿಗೊಡದೆ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಈ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರ್ಯ ಸ್ವಾಗತಾರ್ಹ. ಎಸ್ಟಿ ಪ್ರಮಾಣಪತ್ರದ ಕಡತವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿ ಅದನ್ನು ಮುಖ್ಯಮಂತ್ರಿಗಳು ಅನುಮೋದನೆ ನೀಡಿ ಈ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ಸಚಿವರ ಹಾಗೂ ಸರ್ಕಾರದ ಕಾರ್ಯ ಶ್ಲ್ಯಾಘನೀಯವಾದದ್ದು ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ