ಹೊಸದಿಗಂತ ವರದಿ, ಮಡಿಕೇರಿ:
ಕಾಡಾನೆಯೊಂದು ಮನೆಗೆ ದಾಳಿ ಮಾಡಿ ಅಕ್ಕಿಯ ಚೀಲವನ್ನೇ ಎಳೆದೊಯ್ಯಲು ಯತ್ನಿಸಿದ ಘಟನೆ ಸೋಮವಾರಪೇಟೆ ಸಮೀಪದ ಗಣಗೂರುವಿನಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಗಣಗೂರಿನ ಪಾರ್ವತಿ ಶೇಖರ್ ಎಂಬವರ ವಾಸದ ಮನೆಗೆ ಬೆಳಗಿನ ಜಾವ 3.30ರ ಸುಮಾರಿಗೆ ದಾಳಿ ನಡೆಸಿದ ಕಾಡಾನೆ ಕಿಟಕಿಯ ಮೂಲಕ ಸೊಂಡಿಲು ಹಾಕಿ ಮನೆಯಲ್ಲಿ ಶೇಖರಿಸಿಟ್ಟಿದ್ದ ಅಕ್ಕಿಯ ಚೀಲವನ್ನು ಹೊರಗೆ ಎಳೆದು ತಿನ್ನಲು ಯತ್ನಿಸಿದೆ.
ಈ ಸಂದರ್ಭ ಕಿಟಕಿಯ ಬಾಗಿಲು, ಸರಳುಗಳು ಹಾಗೂ ಮನೆಯ ಗೋಡೆಗೆ ಹಾನಿಯಾಗಿದ್ದು, ಅಕ್ಕಿ ಮನೆಯೊಳಗೆ ಚೆಲ್ಲಿ ಹೋಗಿದೆ. ಚೀಲದೊಂದಿಗೆ ಸ್ವಲ್ಪವೇ ಅಕ್ಕಿ ಆನೆಗೆ ದೊರಕಿದೆ.
ಮನೆಯಲ್ಲಿ ಪಾರ್ವತಿ ಹಾಗೂ ನೆರೆ ಮನೆಯ ಇಬ್ಬರು ಮಹಿಳೆಯರು ಮಾತ್ರ ಇದ್ದ ಸಂದರ್ಭ ಈ ಘಟನೆ ನಡೆದಿದ್ದು, ಶಬ್ಧ ಕೇಳಿ ಮನೆಯ ಲೈಟ್ ಹಾಕಿ ಕಿರುಚಿಕೊಂಡಾಗ ಆನೆ ಕಾಡಿನತ್ತ ತೆರಳಿದೆ.
ಅದೃಷ್ಟವಶಾತ್ ಮನೆಯಲ್ಲಿದ್ದ ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ