ಹೊಸದಿಗಂತ ವರದಿ ಬಾಗಲಕೋಟೆ :
ಜಮಖಂಡಿ ಮತಕ್ಷೇತ್ರದಲ್ಲಿ 21 ಬಿಜೆಪಿ ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪಕ್ಷದ ಹೈ ಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ಪ್ರತಿಜ್ಞೆ ಮಾಡಿದ್ದೇವೆ ಎಂದು ಬಿಜೆಪಿ ಹಿರಿಯ ಮುಖಂಡ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಳು ಬಾರಿ ನಾನು ಉಪ ಚುನಾವಣೆ ಸೇರಿ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿದ್ದೇನೆ. ಗುಜರಾತ ಮಾದರಿಯಲ್ಲಿ ನಮ್ಮ ಹೈ ಕಮಾಂಡ್ ಟಿಕೆಟ್ ನೀಡಲು ರಾಜ್ಯದಲ್ಲಿ ನಿರ್ಧರಿಸಿದ್ದರೆ ಹಿರಿಯರಿಗೆ ಸೇರಿ ನನಗೂ ಟಿಕೆಟ್ ತಪ್ಪಬಹುದು, ಎಲ್ಲರೂ ಆಕಾಂಕ್ಷಿಗಳು ಒಂದಾಗಿದ್ದೇವೆ ಎಂದರು.
ಜಮಖಂಡಿ ಮತಕ್ಷೇತ್ರದಲ್ಲಿ ಹೆಚ್ಚು ಅಭ್ಯರ್ಥಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ ಎಂದರೆ ಬಿಜೆಪಿ ಪಕ್ಷ ಅಷ್ಟು ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.
ಕಾರಣಾಂತರಗಳಿಂದ ನಮ್ಮ ನಮ್ಮ ಬೇದದಿಂದ ಹಿಂದೆ ಸೋತಿದ್ದೆವು. ಈ ಭಾರಿ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹತ್ತು ವರ್ಷಗಳಿಂದ ಜಮಖಂಡಿಯಲ್ಲಿ ನಮ್ಮ ಪಕ್ಷ ಶಾಸಕರು ಇಲ್ಲದೇ ಇದ್ದರೂ, ನಮ್ಮ ಪಕ್ಷದ ಕಾರ್ಯಕರ್ತರು ಬಿಜೆಪಿ ಬಿಟ್ಟು ಹೋಗಿಲ್ಲವೆಂದರು.
ಜಮಖಂಡಿಯಲ್ಲಿ ಶಾಸಕ ಆನಂದ ನ್ಯಾಮಗೌಡರ ಸೋಲಿನ ಹತಾಶದಿಂದ ಭಾಷಣ ಮಾಡುತ್ತಿದ್ದಾರೆ. ಅವರ ಸರ್ಕಾರವಿದ್ದರೂ ಅವರ ಕಾಲದಲ್ಲಿ ಜಮಖಂಡಿಯಲ್ಲಿಅಷ್ಟೊಂದು ಅಭಿವೃದ್ಧಿ ಕೆಲಸವಾಗಿಲ್ಲ ಎಂದರು.
ಜಮಖಂಡಿಯಲ್ಲಿ ಮಾ.12 ರಂದು ಆಗಮಿಸುವ ವಿಜಯ ಸಂಕಲ್ಪ ಯಾತ್ರೆಗೆ 25 ಸಾವಿರ ಜನ ಸೇರುತ್ತಾರೆ ಎಂದು ತಿಳಿಸಿದರು.