ಗುಜರಾತ್ ನಂತರ ಕರ್ನಾಟಕಕ್ಕೆ ಬರ್ತಿದ್ದಾರೆ ಕೇಜ್ರಿವಾಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಏ. 21ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ನಡೆಯಲಿರುವ ಬೃಹತ್‌ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ದಿಲ್ಲಿ ಮಾದರಿಯಿಂದ ಪ್ರೇರಣೆ ಹೊಂದಿರುವ ರಾಜ್ಯ ರೈತ ಸಂಘವು ಸಿಎಂ ಕೇಜ್ರಿವಾಲ್‌ ಅವರಿಗೆ ವಿಶೇಷ ಆಹ್ವಾನ ನೀಡಿದೆ. ಅವರು ಆಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಡಿನ ಸುಮಾರು 50 ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನವಾಗಲಿದೆ ಎಂದರು.
ಜನಸಾಮಾನ್ಯರ ಕುಂದುಕೊರತೆಗಳನ್ನು ಅರಿತುಕೊಂಡು ಬದಲಾವಣೆ ತರುತ್ತಿರುವ ಏಕೈಕ ಪಕ್ಷವೆಂದರೆ ಆಮ್‌ ಆದ್ಮಿ ಪಾರ್ಟಿ. ಪ್ರಾಮಾಣಿಕ ವ್ಯಕ್ತಿಗಳು ರಾಜಕಾರಣಕ್ಕೆ ಬಂದರೆ ಜನಪರ ಕೆಲಸಗಳನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು, ಭ್ರಷ್ಟಾಚಾರವಿಲ್ಲದ ಆಡಳಿತ ನೀಡಬಹುದು ಎಂಬುದನ್ನು ದಿಲ್ಲಿಯ ಕೇಜ್ರಿವಾಲ್‌ ನೇತೃತ್ವದ ಸರಕಾರ ಕಳೆದ ಏಳು ವರ್ಷಗಳಲ್ಲಿ ತೋರಿಸಿಕೊಟ್ಟಿದೆ. ತೆರಿಗೆ ಹಣವು ಕಳ್ಳ ರಾಜಕಾರಣಿಗಳ ಜೇಬು ಸೇರುವುದನ್ನು ತಪ್ಪಿಸಿ, ಅಲ್ಲಿನ ಆರೋಗ್ಯ, ಶಿಕ್ಷಣ, ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯ ನೀಡುವುದಕ್ಕೆ ಬಳಸಲಾಗಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.
ಕಳೆದ 75 ವರ್ಷಗಳಲ್ಲಿ ಕರ್ನಾಟಕದ ರೈತರು ಮೂರೂ ಪಕ್ಷಗಳಿಗೆ ಮತ ನೀಡಿ ಗೆಲ್ಲಿಸಿ ಕಳಿಸಿದರು. ಮೂರೂ ಪಕ್ಷಗಳಲ್ಲಿ ಯಾರೂ ರೈತನ ಬವಣೆ ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲರಿಂದ ಅನ್ಯಾಯ ಎದುರಿಸಿ ತಾವೇ ರಾಜಕಾರಣಕ್ಕಿಳಿಯಲು ರೈತರು ತೀರ್ಮಾನಿಸಿದ್ದಾರೆ. ಅವರ ಮುಂದಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿ, ಆಮ್ ಆದ್ಮಿ ಪಾರ್ಟಿಯೊಂದೇ ತಮಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂಬ ತೀರ್ಮಾನಕ್ಕೆ ರೈತರು ಬಂದಿದ್ದಾರೆ ಎಂದರು.
ಇತ್ತೀಚೆಗೆ ನಡೆದ ಪಂಜಾಬ್ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಎಎಪಿ ಗೆದ್ದಿದೆ. ಇದರಲ್ಲಿ 82 ಜನರು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದವರು. ಬೇರೆ ಪಕ್ಷದವರ ರೀತಿ ಎಎಪಿ ವ್ಯಕ್ತಿಯ ಬ್ಯಾಂಕ್ ಬ್ಯಾಲೆನ್ಸ್ ನೋಡುವುದಿಲ್ಲ. ಬದಲಾಗಿ, ಆತನ ಸಾಮಾಜಿಕ ಕಾಳಜಿ ಹಾಗೂ ಮತದಾರರ ಬಗ್ಗೆ ಇರುವ ಕಳಕಳಿಯನ್ನು ನೋಡುತ್ತದೆ. ಸಾಮಾನ್ಯರನ್ನು ನಾಯಕರನ್ನಾಗಿ ಮಾಡುವ ಎಎಪಿಯನ್ನು ಜನಸಾಮಾನ್ಯರು ಬಳಸಿಕೊಳ್ಳಬೇಕು ಎಂದು ಈಚೆಗೆ ಪಕ್ಷ ಸೇರಿದ ಭಾಸ್ಕರ್ ರಾವ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!