ಹೊಸದಿಗಂತ ಡಿಜಿಟಲ್ ಡೆಸ್ಕ್
ಕರ್ನಾಟಕದಲ್ಲಿ ಎಸ್ಸಿ/ಎಸ್ಟಿ ಕೋಟಾವನ್ನು ಹೆಚ್ಚಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸಾಂವಿಧಾನಿಕ ತಿದ್ದುಪಡಿಯನ್ನು ಕೋರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನ್ಯಾಯಮೂರ್ತಿ ಎಚ್ಎನ್ ನಾಗಮೋಹನ್ ದಾಸ್ ಆಯೋಗದ ವರದಿ ಕುರಿತು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರೊಂದಿಗೆ ಸರ್ವಪಕ್ಷಗಳ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ನಾಗಮೋಹನ್ ದಾಸ್ ಆಯೋಗವು 2020 ರ ಜುಲೈ ನಲ್ಲಿ ಎಸ್ಸಿ ಕೋಟಾವನ್ನು ಶೇಕಡಾ 15 ರಿಂದ 17 ಕ್ಕೆ ಮತ್ತು ಎಸ್ಟಿಗಳ ಮೀಸಲಾತಿಯನ್ನು ಶೇ 3 ರಿಂದ ಶೇ. 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತು.
“ಈ ಬೇಡಿಕೆಯು ದೀರ್ಘಕಾಲ ಬಾಕಿಯಿತ್ತು ಮತ್ತು ನ್ಯಾಯಯುತವಾಗಿತ್ತು. ಸಂವಿಧಾನದ ಆಶಯದಂತೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಶನಿವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಔಪಚಾರಿಕ ನಿರ್ಧಾರ ಕೈಗೊಳ್ಳಲಾಗುವುದು ‘ ಎಂದು ಬೊಮ್ಮಾಯಿ ಸಭೆ ಬಳಿಕ ಹೇಳಿದ್ದಾರೆ.
ಆಯೋಗದ ವರದಿಯನ್ನು ತಕ್ಷಣವೇ ಜಾರಿಗೆ ತರಲು ಬಿಜೆಪಿ ಸರ್ಕಾರವು ಎಸ್ಸಿ/ಎಸ್ಟಿ ಶಾಸಕರಿಂದ ಭಾರಿ ಒತ್ತಡಕ್ಕೆ ಒಳಗಾಗಿತ್ತು. ಎಸ್ಟಿ ಕೋಟಾ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು.
SC/ST ಕೋಟಾವನ್ನು ಹೆಚ್ಚಿಸಲು ಕರ್ನಾಟಕ ಈಗ ಇರುವ ಏಕೈಕ ಮಾರ್ಗವೆಂದರೆ ಶೆಡ್ಯೂಲ್ 9 ಮಾರ್ಗದ ತಿದ್ದುಪಡಿ ಕೋರುವುದು. ಪ್ರಸ್ತುತ, ಕರ್ನಾಟಕವು ಒಬಿಸಿಗಳಿಗೆ 32 ಪ್ರತಿಶತ, ಎಸ್ಸಿಗಳಿಗೆ 15 ಪ್ರತಿಶತ ಮತ್ತು ಎಸ್ಟಿಗಳಿಗೆ ಶೇ. 3 ರಂತೆ ಒಟ್ಟು 50 ಪ್ರತಿಶತದಷ್ಟು ಮೀಸಲಾತಿಯನ್ನು ಒದಗಿಸುತ್ತದೆ. ಎಸ್ಸಿ/ಎಸ್ಟಿ ಕೋಟಾವನ್ನು ಹೆಚ್ಚಿಸುವುದರಿಂದ ಮೀಸಲಾತಿ ಪ್ರಮಾಣವನ್ನು ಶೇಕಡಾ 56 ಕ್ಕೆ ಏರಿಕೆಯಾಗಿಲಿದೆ. ಈ ಹೀಗೆ ಏರಿಸಿದರೆ ಇದು ಇಂದಿರಾ ಸಾಹ್ನಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮೀಸಲಾತಿ ಪ್ರಮಾಣಕ್ಕೆ ವಿರುದ್ಧವಾಗಲಿದೆ. ಆದ್ದರಿಂದ ಸಾಂವಿಧಾನಿಕ ತಿದ್ದುಪಡಿಗೆ ಕೋರುವ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ