ಹೊಸದಿಗಂತ ಡಿಜಿಟಲ್ ಡೆಸ್ಕ್
ಗದಗ-ಯಳವಗಿ ರೈಲ್ವೆ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ರಾಜ್ಯ ಆಡಳಿತವು ತನ್ನ ಪಾಲಾದ ₹ 600 ಕೋಟಿ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಆ ರೈಲು ಶಿರಟ್ಟಿ ಮೂಲಕ ಹಾದು ಹೋಗಲು ಪ್ರಯತ್ನಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬೊಮ್ಮಾಯಿ, ‘ತಮಗೊಂಡ ಯೋಜನೆಗೆ ಶೀಘ್ರ ಮಂಜೂರಾತಿ ನೀಡಿ, ಜಾಲವಾಡಗಿ ನೀರಾವರಿ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು, ಶಿರಹಟ್ಟಿ ಹಾಗೂ ಮುಂಡರಗಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು. ಒಂದು ತಿಂಗಳೊಳಗೆ ಎಲ್ಲ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಒಂದು ತಿಂಗಳಲ್ಲಿ ತಾಂಡಾದ ಪ್ರತಿ ಮನೆಗೆ ಹಕ್ಕುಪತ್ರ ವಿತರಿಸಿ, ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು’’ ಎಂದರು.
ಮಳೆಯಿಂದ ಬೆಳೆ ನಷ್ಟಕ್ಕೆ ಗದಗ ಜಿಲ್ಲೆಯ 1.2 ಲಕ್ಷ ರೈತರಿಗೆ ಸರ್ಕಾರ ಈಗಾಗಲೇ ₹ 209 ಕೋಟಿ ಇನ್ಪುಟ್ ಸಬ್ಸಿಡಿ ವಿತರಿಸಿದೆ ಎಂದು ತಿಳಿಸಿದ ಮುಖ್ಯಮಂತ್ರಿ, ಶಿರಹಟ್ಟಿಯ ಕನಕದಾಸರ ಸಭಾಂಗಣಕ್ಕೆ ₹ 1 ಕೋಟಿ ಬೇಡಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಜತೆಗೆ ಜಿಲ್ಲೆಗೆ ₹97 ಕೋಟಿ ಬೆಳೆ ವಿಮೆ ಹಣ ವಿತರಿಸಲಾಗಿದ್ದು, ಪಿಎಂ ಕಿಸಾನ್ ಯೋಜನೆಯಡಿ ಗದಗಕ್ಕೆ ₹159 ಕೋಟಿ ಬಂದಿದೆ’ ಎಂದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರು, ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಬಿ.ಸಿ.ಪಾಟೀಲ್, ಬಿ.ಶ್ರೀರಾಮುಲು, ಸಂಸದ ಶಿವಕುಮಾರ್ ಉದಾಸಿ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ