ಹೊಸದಿಗಂತ ವರದಿ, ಹುಬ್ಬಳ್ಳಿ :
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಕೈಗಾರಿಕೆಗಳ ಸ್ಥಾಪನೆಯನ್ನು ಸರಳೀಕರಣಗೊಳಿಸಿದ್ದು, ಇದರ ಲಾಭ ಕರ್ನಾಟಕದಲ್ಲೂ ಆಗಿದೆ
ಎಂದು ಕೇಂದ್ರದ ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಹೇಳಿದರು.
ಇಲ್ಲಿನ ಗೋಕುಲ್ ರಸ್ತೆಯ ಶುಭೋದಯ ಕನ್ವಕ್ಷನ್ ಸಭಾಂಗಣದಲ್ಲಿ ಬಿಜೆಪಿ ವತಿಯಿಂದ ಭಾನುವಾರ ಹಮ್ಮಿಕೊಂಡದ್ದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಸಭೆ, ಕೈಗಾರಿಕೋದ್ಯಮಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದ ಬಜೆಟ್ನಲ್ಲಿ ನಮ್ಮ ಸರ್ಕಾರ ಮೂಲಸೌಕರ್ಯಕ್ಕಾಗಿ ೧೦ ಲಕ್ಷ ಕೋಟಿ ಹಣ ಮೀಸಲಿಟ್ಟಿದೆ. ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ೩.೫ ಕೋಟಿ ಜನ ಲಕ್ಷಾಪತಿಯಾಗಿದ್ದಾರೆ. ೧೨ ಕೋಟಿ ಮನೆಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಪಿಯೂಶ್ ಗೋಯಲ್ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಮೆಘಾ ಟೆಕ್ಸ್ಟೈಲ್ಸ್ ಪಾರ್ಕ್ನ್ನು ಕರ್ನಾಟಕಕ್ಕೆ ನೀಡಿದ್ದಾರೆ. ಕೈಗಾರಿಕಾ ಪಾಲಸಿ ಬದಲಾವಣೆಯಿಂದ ಕೈಗಾರಿಕಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಧಾರವಾಡ ಜಿಲ್ಲೆಗೆ ನಾಲ್ಕು ಸಕ್ಕರೆ ಕಾರ್ಖಾನೆಗಳನ್ನು , ಒಂದು ಎಥಿನಾಲ್ ಘಟಕವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಡಾ. ಮಹೇಶ ನಾಲವಾಡ, ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಪ್ರದೀಪ ಪೈ, ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ, ನರೇಂದ್ರ ಕುಲಕರ್ಣಿ, ಜಯತೀರ್ಥ ಕಟ್ಟಿ, ಕಿರಣ ಹೆಬಸೂರ ಇದ್ದರು.